ಸಚಿವರ ಸೋಲು: ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕಣ್ಣುಕುಕ್ಕುವ ಜಯ ಗಳಿಸಿದ್ದರೂ ಹಾಲಿ ಸರ್ಕಾರದ ಏಳು ಸಚಿವರು ಸೋಲಿನ ರುಚಿ ಕಂಡಿದ್ದಾರೆ.
ಟಿ.ವಿ ಚರ್ಚೆಗಳ ಸಂದರ್ಭದಲ್ಲಿ ಮೋದಿ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಮಾತುಗಾರ ಆರೋಗ್ಯ ಸಚಿವ ಜಯನಾರಾಯಣ್ ವ್ಯಾಸ್ ಸೋಲನ್ನಪ್ಪಿದ್ದಾರೆ. ಅವರ ಹೊರತಾಗಿ ಕೃಷಿ ಸಚಿವ ದಿಲೀಪ್ ಸಂಘಾನಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಫಕೀರ್ಭಾಯ್ ವಘೇಲಾ, ಅರಣ್ಯ ಸಚಿವ ಕಿರಿಟ್ಸಿನ್ಹ್ ರಾಣಾ ಹಾಗೂ ಕೃಷಿ ಖಾತೆ ರಾಜ್ಯ ಸಚಿವ ಕನುಭಾಯ್ ಭಲಾಲ ಸಹ ಪರಾಭವಗೊಂಡಿದ್ದಾರೆ.
ಹಿಮಾಚಲದಲ್ಲಿ ಕಾಂಗ್ರೆಸ್ಗೆ ವಿಜಯಮಾಲೆ
ಈ ಗುಡ್ಡಗಾಡು ರಾಜ್ಯದಲ್ಲಿ ಕಾಂಗ್ರೆಸ್ನ ಹಿರಿಯ ರಾಜಕಾರಣಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ 78 ವರ್ಷದ ವೀರಭದ್ರ ಸಿಂಗ್ ಬಿಜೆಪಿಯವರು ತಮ್ಮ ವಿರುದ್ಧ ಮಾಡಿದ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಗೆಲುವಿನ ರೂವಾರಿಯಾಗಿದ್ದಾರೆ.
ಚುನಾವಣೆ ಘೋಷಣೆಯಾದ ಮೇಲೆ, ಕೊನೆಯ ಹಂತದಲ್ಲಿ ತಮಗೆ ಪ್ರಚಾರ ಕಾರ್ಯದ ಹೊಣೆ ಹೊರಿಸಿದ್ದರೂ ವೀರಭದ್ರ ಸಿಂಗ್ ಪಕ್ಷದ ವರಿಷ್ಠರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಜಯ ಗಳಿಸಿರುವ ಅವರು ಈ ಬಾರಿಯೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಸಿಂಗ್ ಅವರಿಗೆ ಇದು 8ನೇ ಗೆಲುವು.
ಪ್ರೇಮ್ಕುಮಾರ್ ಧುಮಾಲ್ ಸರ್ಕಾರ ಹೊರಿಸಿದ್ದ ಭ್ರಷ್ಟಾಚಾರದ ಆರೋಪದಿಂದಾಗಿ ಈ ವರ್ಷದ ಜೂನ್ನಲ್ಲಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಸಿಂಗ್ ಈಗ ಚುನಾವಣೆಯ `ಅಗ್ನಿಪರೀಕ್ಷೆ'ಯನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಕಾಂಗ್ರೆಸ್ನ ಹಿರಿಯ ನಾಯಕಿ ವಿದ್ಯಾ ಸ್ಟೋಕ್ಸ್ ಥಿಯೋಗ್ ಕ್ಷೇತ್ರದಿಂದ ಜಯಗಳಿಸಿದ್ದು, ಅವರಿಗೂ ಇದು 8ನೇ ಗೆಲುವು.
ಹಾಲಿ ಮುಖ್ಯಮಂತ್ರಿ ಧುಮಾಲ್ ಹಮೀರ್ಪುರ್ ಕ್ಷೇತ್ರದಿಂದ ಜಯ ಗಳಿಸಿದ್ದರೂ ಅವರ ಸಂಪುಟ ಸಹೋದ್ಯೋಗಿಗಳಾದ ನರೀಂದರ್ ಬ್ರಗತಾ, ಖಿಮಿ ರಾಮ್, ಕೃಷ್ಣನ್ ಕುಮಾರ್ ಮತ್ತು ರೋಮೆಷ್ ಧವಾಲಾ ಪರಾಭವಗೊಂಡಿದ್ದಾರೆ.
ವೀರಭದ್ರ ಸಿಂಗ್ ಅವರ ಬದ್ಧವೈರಿ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ವಿ.ಬಿ. ಸಿಂಗ್ ಷಾಹಪುರ್ನಲ್ಲಿ ಸೋಲಪ್ಪಿದ್ದಾರೆ.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ವರ್ಮಾ ಸುಜಾನ್ಪುರ್ ಕ್ಷೇತ್ರದಲ್ಲಿ ಬಿಜೆಪಿಯ ಭಿನ್ನಮತೀಯ ರಾಜೀಂದರ್ ಸಿಂಗ್ ಎದುರು ಸೋಲು ಉಂಡಿದ್ದಾರೆ.
68 ಸದಸ್ಯ ಬಲದ ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ 36 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಸರಳ ಬಹುಮತಕ್ಕಿಂತ 2 ಹೆಚುವರಿ ಸ್ಥಾನ ಗಳಿಸಲಷ್ಟೇ ಯಶಸ್ವಿಯಾಗಿದೆ. ಕಳೆದ ಚುನಾವಣೆಗಿಂತ ಕಾಂಗ್ರೆಸ್ 13 ಹೆಚ್ಚುವರಿ ಸ್ಥಾನ ಗಳಿಸಿದೆ. ಕಳೆದ ಚುನಾವಣೆಯಲ್ಲಿ 41 ಕ್ಷೇತ್ರದಲ್ಲಿ ಜಯಗಳಿಸಿದ್ದ ಬಿಜೆಪಿ ಈಗ ಕೇವಲ 26 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ.