ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ, ಸಹಸ್ರ ಬಿಲ್ವಪತ್ರೆ ಅರ್ಚನೆಯೊಂದಿಗೆ ಮತ್ತಿತರ ಧಾರ್ಮಿಕ ಕಾರ್ಯಗಳು ವಿಧವತ್ತಾಗಿ ನಡೆದವು. ಮಧ್ಯಾಹ್ನ 1ಕ್ಕೆ ಸರಿಯಾಗಿ ಜರುಗಿದ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ, ತೊರೇಮಠದ ರಾಜಶೇಖರ ಸ್ವಾಮೀಜಿ, ಗೊಲ್ಲಹಳ್ಳಿ ಜಂಗಮ ಮಠದ ಗೌರಿಶಂಕರ ಸ್ವಾಮೀಜಿ ಹಾಗೂ ದೊಡ್ಡಗುಣಿ ರಂಭಾಪುರಿ ಶಾಖಾಮಠದ ರೇಣುಕಾ ಶಿವಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಮುನ್ನಾ ಸ್ವಾಮಿಗೆ ಪೂಜೆ ಸಲ್ಲಿಸಿದರು. ಶಾಸಕ ಎಸ್.ಆರ್.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿ.ಪಂ.ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ತಾ.ಪಂ.ಅಧ್ಯಕ್ಷ ಗರಿಕಡ್ಡಿ ಶಿವಣ್ಣ, ಉಪವಿಭಾಗಾಧಿಕಾರಿ ಕುಮಾರ್, ತಹಶೀಲ್ದಾರ್ ಎಚ್.ಜ್ಞಾನೇಶ್ ಇತರರು ಭಾಗವಹಿಸಿದ್ದರು.