ಬೆಂಗಳೂರು: `ನನ್ನನ್ನು ಮದುವೆಯಾಗುತ್ತೀಯ ಎಂದು ಹೇಮಶ್ರೀಯೇ ಕೇಳಿದ್ದಳು. ಆದರೆ, ಆಕೆಯ ಮನವಿಯನ್ನು ನಾನು ನಿರಾಕರಿಸಿದ್ದೆ~ ಎಂದು ಹೇಮಶ್ರೀ ಆಪ್ತ ಮಂಜುನಾಥ್ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ.
`2008ರಲ್ಲಿ ಹೇಮಶ್ರೀ ಪರಿಚಯವಾಯಿತು. ಆಕೆ ಕಾರ್ಯಕ್ರಮಗಳಿಗೆ ಹೋಗುವಾಗ ಕೆಲವೊಮ್ಮೆ ನಾನೇ ಡ್ರಾಪ್ ಮಾಡುತ್ತಿದ್ದೆ. ನನ್ನ ಬಳಿ ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದ ಆಕೆ, ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿದ್ದಳು.
ಆ ಸಂದರ್ಭದಲ್ಲಿ ನನಗೆ ಕೆಲಸ ಇರಲಿಲ್ಲ. ಹೀಗಾಗಿ ಆಕೆ ಮನವಿ ನಿರಾಕರಿಸಿದ್ದೆ. ಬಳಿಕ ಹೇಮಶ್ರೀ ಪೋಷಕರು, ಮಗಳನ್ನು ಸುರೇಂದ್ರಬಾಬುಗೆ ಕೊಟ್ಟು ವಿವಾಹ ಮಾಡಿದರು. ಆಕೆಯ ಮದುವೆ ನಂತರ ಒಮ್ಮೆಯೂ ಅವಳೊಂದಿಗೆ ಮಾತನಾಡಲು ಆಗಲಿಲ್ಲ~ ಎಂದು ಮಂಜುನಾಥ್ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸುರೇಂದ್ರಬಾಬು ಬಂಧನ ಅವಧಿ ಅಂತ್ಯ: ಹೇಮಶ್ರೀ ಸಾವಿನ ಪ್ರಕರಣದಲ್ಲಿ ಬಂಧಿಸಿರುವ ಪತಿ ಸುರೇಂದ್ರ ಬಾಬುವಿನ ಪೊಲೀಸ್ ಬಂಧನದ ಅವಧಿ ಶುಕ್ರವಾರಕ್ಕೆ ಅಂತ್ಯಗೊಳ್ಳಲಿದೆ. ಹೆಚ್ಚಿನ ವಿಚಾರಣೆ ಬಾಕಿ ಇರುವುದರಿಂದ ಆರೋಪಿಯನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪತ್ನಿ ಹೇಮಶ್ರೀ ಕೊಲೆ ಹಿನ್ನೆಲೆಯಲ್ಲಿ ಪೊಲೀಸರು ಸುರೇಂದ್ರಬಾಬುವನ್ನು ಬಂಧಿಸಿ, ಅ. 19ರವರೆಗೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು. `ಆರೋಪಿ ವಿಚಾರಣೆ ವೇಳೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಕಸ್ಟಡಿ ಅವಧಿ ಶುಕ್ರವಾರ ಅಂತ್ಯಗೊಳ್ಳಲಿದೆ.
ಆದರೆ, ಈವರೆಗೂ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈಸೇರಿಲ್ಲ. ಈ ಕಾರಣದಿಂದ ವರದಿ ಬರುವವರೆಗೂ ಆರೋಪಿಯ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ನ್ಯಾಯಾಧೀಶರಲ್ಲಿ ಕೋರುತ್ತೇವೆ~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.