ಕುಣಿಗಲ್: ಸಂಸ್ಕಾರಯುತ ಶಿಕ್ಷಣ ನೀಡುವುದರ ಜತೆಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ವಿಷಯ ಪರಿಣಿತಿಯನ್ನು ಉಂಟು ಮಾಡಿ ಭದ್ರ ಬುನಾದಿ ಹಾಕಬೇಕೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ ಇಲ್ಲಿ ಬುಧವಾರ ತಿಳಿಸಿದರು.
ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕಿನ 111 ಶಾಲೆಗಳ ಗ್ರಂಥಾಲಯಗಳಿಗೆ ರೂ. 3 ಲಕ್ಷ ವೆಚ್ಚದ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಣ ಹಂತದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಎಲ್ಲರನ್ನು ಉತ್ತೀರ್ಣಗೊಳಿಸುವ ಪರಿಪಾಠ ಬೆಳೆದು ಬಂದಿದೆ. ಇದರಿಂದ ಪ್ರೌಢಶಾಲಾ ಹಂತಕ್ಕೆ ಬಂದಾಗ ವಿದ್ಯಾರ್ಥಿಗಳು ವಿಷಯಗಳ ಪರಿಣಿತಿಯನ್ನು ಹೊಂದದೆ ಅನುತ್ತೀರ್ಣರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಯಶಸ್ವಿಗೆ ಧ್ಯಾನ ಅತ್ಯವಶ್ಯಕವಾಗಿದ್ದು, ಪ್ರತಿನಿತ್ಯ ಶಾಲೆ ಪ್ರಾರಂಭದ ಅವಧಿಯಲ್ಲಿ ಕೆಲ ಸಮಯ ಧ್ಯಾನಕ್ಕೆ ಒತ್ತುನೀಡುವಂತೆ ಸಲಹೆ ನೀಡಿದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಜಿ.ಲೋಕೇಶ್, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಕುಂದೂರು ನರಸಿಂಹಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ತಿಮ್ಮಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚಿಕ್ಕರಾಮಣ್ಣ, ಮುಖಂಡ ನಟರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಕೃಷ್ಣ ಉಪಸ್ಥಿತರಿದ್ದರು.