ಬಾಗಲಕೋಟೆ: ರಾಜ್ಯದಲ್ಲಿರುವ ಪ್ರತಿಯೊಂದು ಗ್ರಾಮ ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಪ್ರಗತಿ ಕಾಣಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಅಮೀನಗಡದಲ್ಲಿ ಏರ್ಪಡಿಸಿದ್ದ ಬೂತ್ಮಟ್ಟದ ಬಿಜೆಪಿ ಕಾರ್ಯಕರ್ತರ ಶಕ್ತಿ ಕೇಂದ್ರದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಶೇಷವಾಗಿ ಹಳ್ಳಿಗಾಡಿನ ಜನರು ಮತ್ತು ರೈತರನ್ನು ಗಮನಿಸಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಬಡವರಿಗೆ ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ವೇತನ, ಮಡಿಲು ಯೋಜನೆ, ಈ ರೀತಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದೇ ರೀತಿ ಅಮೀನಗಡ ಭಾಗದಲ್ಲಿ ಒಂದು ಕೋಟಿ ಮೌಲ್ಯದಲ್ಲಿ ರಸ್ತೆ ಕಾಮಗಾರಿ, 17 ಮಹಿಳಾ ಸಂಘಗಳಿಗೆ ಸಹಾಯಧನದಡಿ ಸಾಲ ವಿತರಣೆ, 37 ಜನ ನೇಕಾರರಿಗೆ ಹಿಂದುಳಿದ ವರ್ಗ ಆಯೋಗದಲ್ಲಿ ಸಬ್ಸಿಡಿಯ ಸಾಲ ಮಂಜೂರು ಮಾಡಲಾಗಿದೆ ಎಂದರು.
ಬೂತ್ಮಟ್ಟದಲ್ಲಿರುವ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಸರ್ಕಾರದ ಸಾಧನೆ ಹಾಗೂ ಅಭಿವೃದ್ಧಿಪರ ಹಮ್ಮಿಕೊಂಡಿರುವ ಯೋಜನೆಗಳ ಕುರಿತು ತಿಳಿಸಬೇಕು ಎಂದು ಸಲಹೆ ನೀಡಿದರು.
ಬಿ.ಕೆ.ಮಾಟೂರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ ಯರಗೇರಿ, ನಿಂಗಣ್ಣ ಅರಬಿ, ನಿಂಗಪ್ಪ ಬ್ಯಾಕೋಡ, ರವಿ ಬಂಡಿ, ಎಂ.ಎಸ್.ಆರಬ್ಬಿ, ಎಂ.ಎಸ್.ಮಠ, ಬಸವರಾಜ ಪರ್ವತಿಮಠ, ಪುಂಡಲೀಕಪ್ಪ ಮೂಲಿಮನಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.