ಪಾಂಡವಪುರ: ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವ ಜಾನುವಾರುಗಳಿಗೆ ಪರಿಹಾರ ಕೊಡಿ, ಆಶ್ರಯ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಲ್ಲ, ಪಿಂಚಣಿ ಬರುತ್ತಿಲ್ಲ, ನಲ್ಲಿಗಳಲ್ಲಿ ನೀರು ಬರುತ್ತಿಲ್ಲ, ಪಂಚಾಯಿತಿ ಲಂಚದ ಕಚೇರಿಯಾಗಿದೆ ಎಂದು ಜನರು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ದೂರಿನ ಸುರಿಮಳೆ ಸುರಿಸಿದರು.
ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿ ಸೋಮವಾರ ನಡೆದ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಗೆ ಆಗಮಿಸಿದ ಜನರು ಶಾಸಕರಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವ ಜಾನುವಾರುಗಳಿಗೆ ಪರಿಹಾರ ನೀಡುವಂತೆ ಹಾಗೂ ಆಶ್ರಯ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಜತೆ ಮಾತುಕತೆ ನಡಸಲಾಗುವುದು. ತಾಲ್ಲೂಕಿನಲ್ಲಿ ಸುಮಾರು 50ಕೂ್ಕ ಹೆಚ್ಚು ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಪಶು ಇಲಾಖೆಯ ಬೇಜವಾಬ್ದಾರಿಯಿಂದಾಗಿ ಇಷ್ಟೊಂದು ಜಾನುವಾರುಗಳು ಸಾವನ್ನಪ್ಪಿವೆ ಎಂದು ಹರಿಹಾಯ್ದ ಶಾಸಕರು ರೈತರು ಕೂಡ ಜಾನುವಾರುಗಳಿಗೆ ವಿಮೆ ಮಾಡಿಸಬೇಕು. ಕಾಲಾನುಸಾರ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 5 ಸಾವಿರ ಆಶ್ರಯ ಮನೆಗಳಿಗೆ ಸರಿಯಾಗಿ ಹಣ ಬಿಡುಗಡೆ ಮಾಡಿಲ್ಲ. ಬಡವರ ಆಶ್ರಯು ಮನೆಗಳ ನಿರ್ಮಾಣದ ಹಣಕ್ಕೆ ಮಿತಿಗೊಳಿಸಲಾಗಿದೆ ಹಾಗಾಗಿ ಸರ್ಕಾರ ಕೂಡಲೇ ಆಶ್ರಯ ಮನೆಗಳಿಗೆ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ನಿರ್ಮಾಣದ ವೆಚ್ಚದ ಮಿತಿಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ವೃದ್ದಾಪ್ಯ ವೇತಗಳಿಂದ ವಂಚಿತರಾಗಿರುವವರಿಗೆ ಪಿಂಚಣಿ ಅದಾಲತ್ ನಡೆಸಿ ಸ್ಥಳದಲ್ಲಿಯೇ ಪ್ರಮಾಣ ಪತ್ರ ನೀಡಲಾಗುವುದು. ಈಗಾಗಲೇ ಜಕ್ಕನಹಳ್ಳಿ ಹೋಬಳಿಯಲ್ಲಿ ಅದಾಲತ್ ನಡೆಸಲಾಗಿದೆ. ಸೆ. 24ರಂದು ಚಿನಕುರಳಿ ಹೋಬಳಿಯಲ್ಲಿ ನಂತರ ಕಸಬಾ ಹೋಬಳಿಯಲ್ಲಿ ಅದಾಲತ್ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸೆ್ಯ ವಿ. ವಸಂತಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಕೆ.ಆರ್. ಶಿವಕುಮಾರ್, ಸದಸ್ಯರಾದ ವೇಣುಗೋಪಾಲ್, ಚಿಕ್ಕಣ್ಣ, ಚಿಕ್ಕಮಂಚಯ್ಯ, ಸತೀಶ್, ಹೇಮಲತಾ, ಚಂದ್ರಕಲಾ, ರುಕ್ಮಿಣಿ, ಮಮತ, ಲತಾ, ಭಾಗ್ಯಮ್ಮ, ಕೆ.ವಿ. ವಿಜಯಕುಮಾರ್, ಸೋಮು, ನೋಡಲ್ ಅಧಿಕಾರಿ ಬಿಇಒ ಸ್ವಾಮಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.