ಭಟ್ಕಳ: `ಕೋಣನ ಕಂಬಳದಂತಹ ಗ್ರಾಮೀಣ ಕಲೆ, ಕ್ರೀಡೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ' ಎಂದು ಶಾಸಕ ಜೆ.ಡಿ.ನಾಯ್ಕ ಹೇಳಿದರು.
ತಾಲ್ಲೂಕಿನ ಕುಂಟವಾಣಿಯ ಬರಗದ್ದೆ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ 39ನೇ ವರ್ಷದ ಕೋಣನ ಕಂಬಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನೆರವಿಲ್ಲದೇ ಕಳೆದ 38 ವರ್ಷಗಳಿಂದ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೋಣನ ಕಂಬಳವನ್ನು ನಡೆಸಿಕೊಂಡು ಬರುತ್ತಿರುವ ಸೋಮಯ್ಯ ಗೊಂಡರ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.
ಎ.ಸಿ.ಎಫ್ ಆರ್.ಜಿ. ಭಟ್, ಎಎಸ್ಪಿ ಸುಧೀರಕುಮಾರ ರೆಡ್ಡಿ, ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಎಸ್ಜಿ ಗೊಂಡ, ಬಡಿಯಾ ಗೊಂಡ ಮುಂತಾದವರು ಮಾತನಾಡಿದರು.
ವಲಯ ಅರಣ್ಯಾಧಿಕಾರಿ ದಯಾನಂದ ಬಂಟ್, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ ಹೆಗಡೆ, ಎಪಿಎಂಸಿ ಉಪಾಧ್ಯಕ್ಷ ಗಣೇಶ ಹೆಬ್ಬಾರ್, ಎಸ್.ವಿ. ಹೆಬ್ಬಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಡಿ. ನಾಯ್ಕ, ಸುನಂದ ಜಂಬರಮಠ, ಪಾರ್ಶ್ವನಾಥ ಗೌಡ, ಶೈಲೇಂದ್ರಗೌಡ, ಸಿಪಿಐ ಕೆ.ಯು. ಬೆಳ್ಳಿಯಪ್ಪ, ವೀರೇಂದ್ರ ಶಾನುಭಾಗ ಉಪಸ್ಥಿತರಿದ್ದರು. ಕೋಣನ ಕಂಬಳದ ರೂವಾರಿ ಸೋಮಯ್ಯ ಎಸ್ ಗೊಂಡ ಸ್ವಾಗತಿಸಿದರು.
ಸುಮಾರು 40ಕ್ಕೂ ಹೆಚ್ಚು ಕೋಣನ ಜೋಡಿಗಳು ಕಂಬಳದಲ್ಲಿ ಪಾಲ್ಗೊಂಡಿದ್ದವು. ಸ್ಥಳೀಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿತ್ತು.