ಮಹದೇವಪುರ: ಗ್ರಾಮೀಣ ಪ್ರದೇಶದ ಮಕ್ಕಳಿಂದಾಗಿಯೇ ಕಬಡ್ಡಿಯಂತಹ ದೇಸಿ ಕ್ರೀಡೆಗಳು ಇನ್ನೂ ಜೀವಂತವಾಗಿವೆ ಎಂದು ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಎಂ. ಹನುಮಂತೇಗೌಡ ಅಭಿಪ್ರಾಯಪಟ್ಟರು.
ಸಮೀಪದ ಹೂಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ನಗರ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾವಳಿಯ ಸಮಾರಂಭದಲ್ಲಿ ವಿಜೇತರಿಗೆ ಬಹುಮಾ ವಿತರಿಸಿ ಮಾತನಾಡಿದರು.
ಬಹುತೇಕ ನಗರ ಪ್ರದೇಶದ ಮಕ್ಕಳು ಕ್ರಿಕೆಟ್, ಟೆನಿಸ್ನಂತಹ ವಿದೇಶಿ ಕ್ರೀಡೆಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಇದರಿಂದಾಗಿ ದೇಶಿ ಕ್ರೀಡೆಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೇಳಿದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಕ್ರೀಡಾಪಟು ಎಚ್.ಎಸ್.ಪಿಳ್ಳಪ್ಪ ಮಾತನಾಡಿ, ಕಬಡ್ಡಿಯನ್ನು ಒಲಂಪಿಕ್ಗೆ ಸೇರ್ಪಡೆ ಮಾಡದಿರುವುದು ಬೇಸರದ ವಿಷಯ. ಈ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರವಾಗಲಿ, ಸಂಸ್ಥೆಯಾಗಲಿ ಅಂತರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಮೇಲೆ ಒತ್ತಡ ಹೇರಬೇಕು.
ಮುಂದಿನ ಒಲಂಪಿಕ್ ಕ್ರೀಡಾಕೂಟದಲ್ಲಿಯಾದರೂ ಕಬಡ್ಡಿ ಆಟವನ್ನು ಸೇರ್ಪಡೆ ಮಾಡಿಕೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಮೂರ್ತಿ, ಪೂರ್ವ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ, ದೈಹಿಕ ಶಿಕ್ಷಕರಾದ ವಿರುಪಾಕ್ಷಯ್ಯ, ವಿ.ಜಯರಾಮ್ ಉಪಸ್ಥಿತರಿದ್ದರು.
ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಹತ್ತಕ್ಕೂ ಹೆಚ್ಚು ಕಬಡ್ಡಿ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಹೂಡಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಕಬಡ್ಡಿ ತಂಡ ಪ್ರಥಮ ಸ್ಥಾನ ಗಳಿಸಿತು.
ದಕ್ಷಿಣ ತಾಲೂಕಿನ ಅರಕೆರೆ ಸರ್ಕಾರಿ ಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿತು.