ಶ್ರೀರಂಗಪಟ್ಟಣ: ಶೇ.100ರಷ್ಟು ಒಣ ಭೂಮಿ ಹೊಂದಿರುವ ತಾಲ್ಲೂಕಿನ ಚನ್ನನೆಕರೆ ಗ್ರಾಮದಲ್ಲಿ ಕೃಷಿಗೆ ನೀರಾವರಿ ಸೌಲಭ್ಯ ಇಲ್ಲ ಎಬ ಕೊರಗಿಗಿಂತ ರಸ್ತೆ, ಚರಂಡಿಗಳ ಸಮಸ್ಯೆಯೇ ದೊಡ್ಡದು.ಊರಿಗೆ ಕಾಲಿಟ್ಟರೆ ಮಣ್ಣಿನ ರಸ್ತೆಗಳು, ಈ ಹಾಳು ಬೀದಿಗಳಲ್ಲಿ ಹರಿಯುವ ಚರಂಡಿ ನೀರಿನಿಂದ ಉಂಟಾದ ಕೊಚ್ಚೆಗುಂಡಿ ಕಣ್ಣಿಗೆ ರಾಚುತ್ತವೆ. ಹತ್ತಾರು ವರ್ಷಗಳ ಹಿಂದೆ ಚರಂಡಿ ನಿರ್ಮಾಣಕ್ಕೆ ಬಳಸಿರುವ ಕಲ್ಲು ಚಪ್ಪಡಿಗಳು ನಡೆದಾಡುವವರನ್ನು ತಡೆದು ನಿಲ್ಲಿಸುತ್ತವೆ.
ಯಾವಾಗಲೋ ಅರ್ಧ ಮಾಡಿ ಬಿಟ್ಟುಹೋದ ಚರಂಡಿಗಳಲ್ಲಿ ಕೆಸರು ತುಂಬಿಕೊಂಡಿದ್ದು ಸೊಳ್ಳೆಗಳು ಗುಂಯ್...ಗುಡುತ್ತವೆ. ಚನ್ನನಕೆರೆಗೆ ಸಂಪರ್ಕ ಕಲ್ಪಿಸುವ ಕೊಡಿಯಾಲ- ಟಿ.ಎಂ.ಹೊಸೂರು ರಸ್ತೆ ಇನ್ನಿಲ್ಲದಂತೆ ಹಾಳಾಗಿದೆ. ಚನ್ನನಕೆರೆ- ತೂಬಿನಕೆರೆ ರಸ್ತೆ ಕೂಡ ಕಿತ್ತೋಗಿದೆ. ಹಾಗಾಗಿ ವಾಹನಗಳು ಸರಿಯಾಗಿ ಇತ್ತ ಬರುತ್ತಿಲ್ಲ.
ರಸ್ತೆ ದುಸ್ಥಿತಿ ತಲುಪಿರುವ ಕಾರಣ ಸಾರಿಗೆ ಸಂಸ್ಥೆಗಳು ಬಸ್ಗಳು ಕೂಡ ಸರಿಯಾಗಿ ಬರುತ್ತಿಲ್ಲ. ಇದರಿಂದ ಪಟ್ಟಣ ಪ್ರದೇಶದ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗ ಇತರ ನಿಮಿತ್ತವಾಗಿ ಹೋಗುವವರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಗ್ರಾಮದ ಆಸುಪಾಸಿನಲ್ಲಿ 500 ಅಡಿ ಆಳಕ್ಕೆ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ಹಾಗಾಗಿ ರೈತರ ಬದುಕು ಅಸಹನೀಯವಾಗಿದೆ. ಕೈ ಕೊಡುವ ಮಳೆ, ಬತ್ತಿ ಹೋಗಿರುವ ಅಂರ್ಜಲದ ಕಾರಣ ಮಣ್ಣಿನ ಮಕ್ಕಳು ಕೃಷಿ ಕಸುಬು ಬಿಟ್ಟು ಉದ್ಯೋಗಕ್ಕಾಗಿ ಕಲ್ಲು ಗಣಿಗಳತ್ತ ಮುಖ ಮಾಡಿದ್ದಾರೆ. ಗ್ರಾಮದ ಆಸುಪಾಸಿನಲ್ಲಿ ನಡೆಯುವ ಕಲ್ಲು ಕ್ವಾರಿಗಳಲ್ಲಿ ಟ್ರ್ಯಾಕ್ಟರ್ ಓಡಿಸುವುದು, ಕಲ್ಲು ಕೆಚ್ಚುವುದು, ವಾಹನಗಳಿಗೆ ಕಲ್ಲು ತುಂಬುವ ಕೆಲಸ ಮಾಡುತ್ತಿದ್ದಾರೆ.
`ಊರಿಗೊಂದು ಸಾಮೂಹಿಕ ಶೌಚಾಲಯ ಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟು ವರ್ಷಗಳೇ ಕಳೆದಿವೆ. ನಮ್ಮೂರಿಗೆ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿ ಹರಿಯುವ ವಿಶ್ವೇಶ್ವರಯ್ಯ ಸಂಪರ್ಕ ನಾಲೆಯಿಂದ ಗ್ರಾಮದ ಕೆರೆಗೆ ನೀರು ತುಂಬಿಸಿಕೊಡಿ ಎಂದು ಕ್ಷೇತ್ರದ ಶಾಸಕರನ್ನು ಕೋರಿದ್ದೇವೆ. ಯಾವುದೂ ಕಾರ್ಯಗತ ಆಗುತ್ತಿಲ್ಲ' ಎಂದು ಲಿಂಗಪ್ಪ ಇತರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.