ಚನ್ನರಾಯಪಟ್ಟಣ: ಪ್ರತಿ ವರ್ಷದಂತೆ ಶಿವರಾತ್ರಿ ಹಬ್ಬದಂದು ಪಟ್ಟಣದಲ್ಲಿ ವಿಜಯಾನಂದ ಆಶ್ರಮದಲ್ಲಿ ನಿರ್ಮಿಸಿದ್ದ ’ಮರಳು ಲಿಂಗ’ವನ್ನು ಬುಧವಾರ ಭಕ್ತರು ದರ್ಶನ ಪಡೆದರು.
ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಾಧೀಶ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಆಶ್ರಮದ ಜಯದೇವಯೋಗಿ ರಾಜೇಂದ್ರ ಸ್ವಾಮೀಜಿ ಸೇರಿದಂತೆ ಹಲವರು ಮರಳು ಲಿಂಗಕ್ಕೆ ಪೂಜೆ ಸಲ್ಲಿಸಿದರು. ನಂತರ ಭಕ್ತಾಧಿಗಳು ಲಿಂಗದ ದರ್ಶನ ಪಡೆದರು. ಬಿಲ್ವಪತ್ರೆ ಅರ್ಪಿಸಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು.
ಇಂದಿನಿಂದ 9 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಮೆರವಣಿಗೆಯಲ್ಲಿ ಕೊಂಡೊಯ್ದು ರಾಜರಾಜೇಶ್ವರಿ ಕೊಳದಲ್ಲಿ ಲಿಂಗವನ್ನು ವಿಸರ್ಜಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿರುವ ಆಂಜನೇಯ, ಗಣಪತಿ, ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಕೊಳದ ಆಂಜನೇಯಸ್ವಾಮಿ ದೇಗುಲದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ವಿವಿಧ ಶಿವಾಲಯಗಳಲ್ಲಿಯೂ ಭಕ್ತರ ಮಹಾಪೂರ ಇತ್ತು. ಬೆಳಿಗ್ಗೆಯಿಂದಲೇ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಕೆಲವು ದೇವಾಲಯಗಳಲ್ಲಿ ಗಂಗಾಜಲ ವಿತರಿಸಲಾಯಿತು.