ಚಿಕ್ಕಮಗಳೂರು: ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಒತ್ತಾಯಿಸಿ ವಿವಿಧ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸಿಪಿಐ ಮತ್ತು ಎಐವೈಎಫ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಎದುರು ನಡೆಸುತ್ತಿರುವ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ.
ಕಡವಂತಿ, ವಸ್ತಾರೆ ಮತ್ತು ದಾಸರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಸ್ಥರು ಬುಧವಾರ ಧರಣಿ ನಡೆಸಿದರು.
ಸಿಪಿಐ ಮತ್ತು ಎಐವೈಎಫ್ ಮುಖಂಡರು ಮತ್ತು ಕಾರ್ಯಕರ್ತರು ಇದೇ 2ರಂದು ಗಾಂಧಿ ಪ್ರತಿಮೆ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ನಿವೇಶನ ನೀಡುವಂತೆ ಸರ್ಕಾರದ ಗಮನ ಸೆಳೆದಿದ್ದರು. ಬೇಡಿಕೆ ಈಡೇರಿಸುವಂಥೆ ಒತ್ತಾಯಿಸಿ ಇದೇ 16ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.
ಧರಣಿಯಲ್ಲಿ ಬುಧವಾರ ಮಾತನಾಡಿದ ಸಿ.ಪಿ.ಐ. ಜಿಲ್ಲಾ ಘಟಕ ಸಹಕಾರ್ಯದರ್ಶಿ ಜಿ.ರಘು, ಚಿಕ್ಕಮಗಳೂರು ತಾಲ್ಲೂಕಿನ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯೆ ರಾಧಾಸುಂದರೇಶ್ ಮಾತನಾಡಿದರು. ಸಿಪಿಐ ತಾಲ್ಲೂಕು ಕಾರ್ಯದರ್ಶಿ ಜಾರ್ಜ್ಆಸ್ಟಿನ್, ಎಐವೈಎಫ್ ಜಿಲ್ಲಾ ಘಟಕ ಕಾರ್ಯ ದರ್ಶಿ ಹೆಡದಾಳ್ಕುಮಾರ್, ಕಳಸಾಪುರ ಶಾಖೆ ಕಾರ್ಯದರ್ಶಿ ಚನ್ನಲಿಂಗೇಗೌಡ, ಬಿಳಗೊಳ ಕಾರ್ಯದರ್ಶಿ ಬಿ.ಡಿ.ಕೃಷ್ಣ, ಜಿಲ್ಲಾ ಮುಖಂಡರಾದ ಎಸ್.ವಿಜಯಕುಮಾರ್, ಎನ್.ಆರ್.ಮಂಜುನಾಥ ಇದ್ದರು.