ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರಿಗೆ ತಂಗುಧಾಮದ ಆಸರೆ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ನಮ್ಮ ಮಕ್ಕಳು ಚಿಂತನಶೀಲ ಮತ್ತು ಕ್ರಿಯಾಶೀಲರಾಗಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ತಂದೆ- ತಾಯಿ- ಮನೆಯ ಪರಿಸರಗಳು ಶಿಕ್ಷಣಕ್ಕೆ ಪೂರಕ ಶಕ್ತಿ. ಏಕೆಂದರೆ, ಮನೆಯ ಪರಿಸರ ಬದುಕನ್ನು ರೂಪಿಸಿದರೆ ಶಿಕ್ಷಣ ಬಾಳನ್ನು ರೂಪಿಸುತ್ತದೆ. ಇದರರ್ಥ `ಬದುಕಿಗೆ ಶಿಕ್ಷಣ ಬೇಡ; ಆದರೆ ಬಾಳಿಗೆ ಶಿಕ್ಷಣ ಬೇಕು~. ಶಿಕ್ಷಣವು ಅರ್ಥಪೂರ್ಣ ಬಾಳನ್ನು ಒದಗಿಸುತ್ತದೆ.

ಎಲ್ಲ ಮಕ್ಕಳಿಗೂ ವಿದ್ಯೆ ಸಿಗಬೇಕು ಎಂಬುದು ಸರ್ವ ಶಿಕ್ಷಣ ಅಭಿಯಾನದ ಮೂಲ ಉದ್ದೇಶಗಳಲ್ಲೊಂದು. ಆದರೆ ಬಡತನದ ಕಾರಣಕ್ಕೆ ದುಡಿಮೆ ಅನಿವಾರ್ಯವಾಗಿ ಶಿಕ್ಷಣದಿಂದ ವಂಚಿತರಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.

ನಗರೀಕರಣ, ಉದಾರೀಕರಣ ಮುಂತಾದವುಗಳಿಂದ ಗ್ರಾಮೀಣ ಬದುಕು ದುರ್ಬರವಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗಿ ಅಲ್ಲಿಯೂ ಬೀದಿಪಾಲಾಗುವ ಕುಟುಂಬಗಳು ಹೆಚ್ಚುತ್ತಿವೆ. ಆದ್ದರಿಂದಲೇ ಬೀದಿ ಮಕ್ಕಳ ಸಂಖ್ಯೆ ನಗರ ಪ್ರದೇಶದಲ್ಲಿ ಅತಿ ಹೆಚ್ಚು. ನಿರ್ಗತಿಕ ಮತ್ತು ಶೋಷಿತ ಕುಟುಂಬಗಳ ಮಕ್ಕಳ ಬದುಕು ಬೀದಿಪಾಲಾಗುತ್ತಿದೆ.

ತಒಬ್ಬ ವ್ಯಕ್ತಿಯ ಜೀವನದಲ್ಲಿ ಬಾಲ್ಯಾವಸ್ಥೆ ತುಂಬಾ ನಿರ್ಣಾಯಕ ಅವಧಿ. ಇದು ಇಡೀ ಬದುಕಿಗೆ ರೂಪ ನೀಡುತ್ತದೆ. ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಉತ್ತಮ ಪರಿಸರ ಅಗತ್ಯ. ಅದಕ್ಕೆ ತಕ್ಕ ವಾತಾವರಣ ಕಲ್ಪಿಸುವಲ್ಲಿ ಶಿಕ್ಷಣಕ್ಕೆ ಮಹತ್ವದ ಪಾತ್ರ.
ಈ ಎಲ್ಲಾ ನಿಟ್ಟಿನಲ್ಲಿ ವಸತಿಹೀನ ಮತ್ತು ಪೋಷಕರಿಲ್ಲದ ಮಕ್ಕಳನ್ನು ಬದುಕಿನ ಒಳಹರಿವಿಗೆ ತರಲು ಸರ್ವ ಶಿಕ್ಷಣ ಇಲಾಖೆ ತಂಗುಧಾಮ ಯೋಜನೆ ರೂಪಿಸಿದೆ.

ಏನಿದು?

ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಾಗಿ ಈ ತಂಗುಧಾಮ. ಕುಡಿತ, ಧೂಮಪಾನ, ಮಾದಕ ವ್ಯಸನಿ ಮಕ್ಕಳು, ಬಾಲ ಕಾರ್ಮಿಕರು, ವೇಶ್ಯಾವಾಟಿಕೆ, ಭಿಕ್ಷಾಟನೆಗೆ ಬಲವಂತದಿಂದ ನೂಕಲಾದ ಮಕ್ಕಳು, ದುಶ್ಚಟಗಳಿಗೆ ಬಲಿಬಿದ್ದು ಶಿಕ್ಷಣದಿಂದ ವಂಚಿತರಾದ ಮಕ್ಕಳು, ಮನೆಗಳಿಂದ ಓಡಿ ಬಂದವರು, ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು (ಬಾಲಾಪರಾಧಿಗಳು), ಅನಾಥರು ಹಾಗೂ ವಿವಿಧ ಕಾರಣದಿಂದ ಪೋಷಕರಿಂದ ದೂರವಾದ ಮಕ್ಕಳಿಗೆ ಇಲ್ಲಿ ತಾತ್ಕಾಲಿಕ ನೆಲೆ (ಗರಿಷ್ಠ 12 ತಿಂಗಳು) ಕಲ್ಪಿಸಲಾಗುತ್ತದೆ.

ಕುಡಿತದ ಚಟ ಬಿಡಿಸುವುದು, ವಿಶೇಷ ತರಬೇತಿ ನೀಡಿ ವಯೋಮಾನಕ್ಕೆ ಅನುಗುಣವಾದ ತರಗತಿಗೆ ದಾಖಲು ಮಾಡುವುದು ಇಲ್ಲಿನ ಮುಖ್ಯ ಕಾರ್ಯ. ಆದರೆ ಮಕ್ಕಳ ಮನಸ್ಸು ಮೃದು, ಅನುಕರಿಸುವ ಹಂಬಲ ಜಾಸ್ತಿ. ಅದಕ್ಕೆ ತಕ್ಕಂತೆಯೇ ಅವರನ್ನು ತಿದ್ದಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸಿ, ಪೋಷಿಸಿ ಮನೋ ಸಾಮಾಜಿಕ ಆರೈಕೆ ಒದಗಿಸುವಲ್ಲಿ ಚಿಣ್ಣರ ತಂಗುಧಾಮ ಮಹತ್ವದ ಪಾತ್ರ ವಹಿಸುತ್ತದೆ.

ಒಂದಿಷ್ಟು ಮಾಹಿತಿ...
-ಸದ್ಯಕ್ಕೆ ಬೆಂಗಳೂರು ನಗರ ಜಿಲ್ಲೆ, ತುಮಕೂರು, ಮೈಸೂರು, ಬೆಳಗಾವಿ, ಗುಲ್ಬರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ ಜಿಲ್ಲೆಗಳು ಚಿಣ್ಣರ ತಂಗುಧಾಮದ ಯೋಜನೆಯ ಅನುಷ್ಠಾನಕ್ಕೆ ಆಯ್ಕೆಯಾಗಿವೆ.

-ಇದು ದಿನದ 24 ಗಂಟೆಗಳೂ ತೆರೆದಿರುತ್ತದೆ.

-ಪ್ರತಿ ತಂಗುಧಾಮದಲ್ಲಿ 50 ಮಕ್ಕಳಿಗೆ ಅವಕಾಶ.

-ವಿಶೇಷವಾಗಿ ಮಕ್ಕಳ ಆರೋಗ್ಯ ಪೋಷಣೆಗೆ ಆದ್ಯತೆ.

-ಇಲ್ಲಿ ಆಹಾರ, ವಸ್ತ್ರ, ಹಾಸಿಗೆ, ದಿನನಿತ್ಯದ ಅವಶ್ಯಕತೆಗಳು ಮತ್ತು ಆಟದ ಸಾಮಗ್ರಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಪೆಟ್ಟಿಗೆ ಹಾಗೂ 24 ಗಂಟೆಯೂ ಯಾವುದೇ ಅವಧಿಯಲ್ಲಿ ಮಕ್ಕಳಿಗೆ ರಕ್ಷಣೆ ಮತ್ತು ಸೌಕರ್ಯ ಒದಗಿಸಲು ಅವಕಾಶವಿರುತ್ತದೆ.

-ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕೇಂದ್ರಗಳನ್ನು ನಿರ್ವಹಿಸಲಾಗುತ್ತದೆ.

-ತಂಗುಧಾಮದಲ್ಲಿ ಕ್ಷೇತ್ರ ಕಾರ್ಯಕರ್ತರು, ವೈದ್ಯರು (ಕನ್ಸಲ್ಟೆಂಟ್ ಸೇವೆ), ಆಪ್ತ ಸಮಾಲೋಚಕರು, ಶಿಕ್ಷಕರು, ಅಡಿಗೆ ಸಹಾಯಕರು, ವಾರ್ಡನ್ ಮತ್ತು ಇತರೆ ಸಿಬ್ಬಂದಿ ಇರುತ್ತಾರೆ.

-ಮಗುವನ್ನು ಪೋಷಕರು ಕರೆದುಕೊಂಡು ಹೋಗಲು ಇಚ್ಛಿಸಿದರೆ ಅಥವಾ ಮಗುವು ಪೋಷಕರೊಂದಿಗೆ ಸೇರಲು ಬಯಸಿದರೆ ಅದಕ್ಕೆ ಸೂಕ್ತ ನೆರವು ನೀಡುವುದು, ಮಗುವಿಗೆ ವಿಶೇಷ ತರಬೇತಿ ಕೊಟ್ಟು ಅಗತ್ಯ ಶೈಕ್ಷಣಿಕ ಸಾಮರ್ಥ್ಯ ಗಳಿಸಿದ ನಂತರ ಮುಖ್ಯವಾಹಿನಿ ಶಾಲೆಗೆ ದಾಖಲಿಸುವುದು ಇವುಗಳ ಕೆಲಸ.

 ತಂಗುಧಾಮದ ವಿಶೇಷಗಳು

-ತಂಗುಧಾಮದಲ್ಲಿ ದಾಖಲಾದ ಮಕ್ಕಳನ್ನು ಒಂದು ವರ್ಷದ ವರೆಗೆ ವ್ಯವಸ್ಥಿತವಾಗಿ ಪಾಲನೆ ಮಾಡಲಾಗುತ್ತದೆ.

-ತಂಗುಧಾಮದ ಒಬ್ಬ ಶಿಕ್ಷಕ ಮಕ್ಕಳ ಅಭಿರುಚಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಆ ನಿಟ್ಟಿನಲ್ಲಿ ತರಬೇತಿ ನೀಡುತ್ತಾರೆ. ಇನ್ನೊಬ್ಬ ಶಿಕ್ಷಕ ಈ ಅಭಿರುಚಿಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಕಥೆಗಳನ್ನು ಹೇಳುವ ಮೂಲಕ ಅಕ್ಷರ ಗುರುತಿಸುವುದನ್ನು ಕಲಿಸುವ ಪ್ರಯತ್ನ ಮಾಡುತ್ತಾರೆ.

-ಒಂದು ವರ್ಷದ ನಂತರ ಈ ಮಕ್ಕಳನ್ನು ವಸತಿ ಶಾಲೆಗಳಿಗೆ ದಾಖಲಿಸಲಾಗುತ್ತದೆ.

-ಅನಾಥ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ನಿಲಯ ಸೌಕರ್ಯ ಇರುವ ಕಡೆ ಪುನರ್ವಸತಿ ಕಲ್ಪಿಸಲಾಗುತ್ತದೆ. ಅಲ್ಲಿ ಶಿಕ್ಷಕರು, ಆಪ್ತ ಸಮಾಲೋಚಕರು ಮತ್ತು ಸೇವಾ ಮನೋಭಾವದ ಸ್ವಯಂಸೇವಾ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಮೂಡಿಸುವ ತರಬೇತಿ ನೀಡಲಾಗುತ್ತದೆ.
                                                              
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT