ಬಾಣಾವರ: ಪಟ್ಟಣದ ಗುರುಕುಲ ಶಾಲೆಯ ಸುತ್ತಮುತ್ತ ಬುಧವಾರ ಎರಡು ಚಿರತೆಗಳು ಕಾಣಿಸಿ ಕೊಂಡಿದ್ದರಿಂದ ಶಾಲೆಯ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ.
ಶಾಲೆಯ ಮಕ್ಕಳು ಬುಧವಾರ ಚಿರತೆಗಳನ್ನು ಕಂಡು ಗಾಬರಿಯಿಂದ ಕೂಗಿಕೊಂಡಿದ್ದರಿಂದ ಶಾಲೆಯ ಸಮೀಪದಲ್ಲೇ ಇರುವ ಮಾವಿನ ತೋಪಿನ ಒಳಗೆ ತಾಯಿ ಚಿರತೆ ಮತ್ತು ಮರಿ ಚಿರತೆ ಸೇರಿಕೊಂಡಿವೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತೋಪಿನ ಒಳಗೆ ಚಿರತೆ ಇರುವುದನ್ನು ತಿಳಿದು ಅವುಗಳನ್ನು ಹಿಡಿಯಲು ಕಡೂರಿನ ಅರಣ್ಯ ಇಲಾಖೆಯಿಂದ ಬೋನುಗಳನ್ನು ತಂದು ಕಾರ್ಯೋನ್ಮುಖರಾಗಿದ್ದಾರೆ. ಶಾಲೆಯ ಮಕ್ಕಳ ಸುರಕ್ಷತೆಗಾಗಿ ಶಾಲೆಗೆ ಎರಡು ದಿನ ರಜೆ ಘೋಷಿಸಲಾಗಿದೆ.
ಬಾಣಾವರ ಹೋಬಳಿಯಲ್ಲಿ ಪದೇ ಪದೇ ಚಿರತೆ ಕಂಡು ಬರುತ್ತಿರು ವುದರಿಂದ ಜನರು ಭಯದಿಂದ ಬದುಕುವಂತಾಗಿದೆ ಆದ್ದರಿಂದ ಚಿರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ರವಿಶಂಕರ್ ಮತ್ತು ಎಸ್.ಆರ್.ಲಕ್ಷ್ಮಣ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.