ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಗುರುವಾರ ಚೀನಾ ನೀಡಲು ಉದ್ದೇಶಿಸಿದ್ದ ಪ್ರಶಸ್ತಿ ತಿರಸ್ಕರಿಸಿದರು. ಭಾರತ-ಚೀನಾ ಸ್ನೇಹ ಅಭಿವೃದ್ಧಿ ಸಂಕೇತವಾಗಿ ಚೀನಾ ಪ್ರಧಾನಿ ವೆನ್ ಜಿಯೊಬೊ ಇಲ್ಲಿ ಈ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ತಮ್ಮನ್ನು ಚೀನಾ ಪರ ತೋರಿಸಿಕೊಳ್ಳಲು ಬಯಸದ ಕರಣ್ ಈ ಪ್ರಶಸ್ತಿ ನಿರಾಕರಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ವಿಶೇಷ ವೀಸಾ ನೀಡುತ್ತಿರುವ ಚೀನಾ ಕ್ರಮಕ್ಕೆ ರಾಜ್ಯಸಭಾ ಸದಸ್ಯ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಅಧ್ಯಕ್ಷ ಹಾಗೂ ಎಐಸಿಸಿ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷರೂ ಆದ ಕರಣ್ ಅವರ ಈ ನಿರ್ಧಾರ ಒಂದು ಪ್ರತಿಭಟನೆಯಾಗಿದೆ.
ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೇರಿ ಒಂಬತ್ತು ಗಣ್ಯರಿಗೆ ಭಾರತ-ಚೀನಾ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ಕಾರಣಕ್ಕಾಗಿ ನೀಡುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರಣ್ ತೆರಳಲಿಲ್ಲ. ಪ್ರೊ. ತಾನ್ ಚುಂಗ್, ಜಿ. ವಿಶ್ವನಾಥನ್, ಜಿ. ಬ್ಯಾನರ್ಜಿ, ಎಂ. ಮೋಹಂತಿ, ಎಸ್. ಚಕ್ರವರ್ತಿ, ಭಾಸ್ಕರನ್, ಶೆರ್ಡಿಲ್ ಹಾಗೂ ಪಲ್ಲವಿ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದ ಇತರ ಭಾರತೀಯರು.