ಬೆಂಗಳೂರು: ಕಾಂಗ್ರೆಸ್ ಅಧಿಕೃತವಾಗಿ ಚುನಾವಣಾ ತಯಾರಿಯತ್ತ ಹೆಜ್ಜೆ ಇಟ್ಟಿದೆ. ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ ಮತ್ತು ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಎರಡು ವಿಭಾಗಗಳ ಪಕ್ಷದ ಪದಾಧಿಕಾರಿಗಳ ಸಭೆ ಭಾನುವಾರ ನಡೆಯಲಿದೆ.
ಕೃಷ್ಣ ಅವರು ಬೆಂಗಳೂರು ವಿಭಾಗದ ನೇತೃತ್ವ ವಹಿಸಿದ್ದರೆ, ಮುನಿಯಪ್ಪ ಅವರಿಗೆ ಮೈಸೂರು ವಿಭಾಗದ ನೇತೃತ್ವ ನೀಡಿ ಇತ್ತೀಚೆಗೆ ಎಐಸಿಸಿ ಆದೇಶ ಹೊರಡಿಸಿತ್ತು. ತಮಗೆ ವಹಿಸಿರುವ ವಿಭಾಗಗಳಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಎಐಸಿಸಿ ಈ ಮುಖಂಡರಿಗೆ ಸೂಚಿಸಿತ್ತು.
ಕೆಪಿಸಿಸಿ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಕೃಷ್ಣ ಅವರು ಬೆಂಗಳೂರು ವಿಭಾಗದ ಎಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಸಭೆ ನಡೆಸುವರು. ಇದೇ ರೀತಿ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಮುನಿಯಪ್ಪ ಅವರು ಮೈಸೂರು ವಿಭಾಗದ ಸಭೆ ನಡೆಸುತ್ತಾರೆ.
ಈ ಸಭೆಗಳ ಬಳಿಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಯಲಿದೆ.
ಸಿಪಿಐ ಸಭೆ: ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಸಿಪಿಐ ಇದೇ 23ರಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆ ನಡೆಸಲಿದೆ. ಉಡುಪಿ- ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸುವ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವರು. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಥವಾ ಇತರರನ್ನು ಬೆಂಬಲಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಮೂರು ಜಿಲ್ಲೆಗಳ ರಾಜ್ಯ ಸಮಿತಿ ಸದಸ್ಯರಿಗೂ ಆಹ್ವಾನ ನೀಡಲಾಗಿದೆ. ಬಿಜೆಪಿ ವಿರೋಧಿ ಶಕ್ತಿಗಳು ಒಂದಾಗಿ ಚುನಾವಣೆ ಎದುರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಪಿ.ವಿ.ಲೋಕೇಶ್ ತಿಳಿಸಿದರು.