ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸುದ್ದಿಗಳು

Last Updated 26 ಏಪ್ರಿಲ್ 2013, 6:50 IST
ಅಕ್ಷರ ಗಾತ್ರ

ಬಿಜೆಪಿ ಅಭ್ಯರ್ಥಿ ಮಲ್ಲೇಶಪ್ಪ ಮತಯಾಚನೆ
ಸವಣೂರ:
ಹಾವೇರಿ ವಿಧಾನಸಭಾ ಕ್ಷೇತ್ರದ ಸವಣೂರ ತಾಲ್ಲೂಕ ಹತ್ತಿಮತ್ತೂರ ಹೋಬಳಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಲ್ಲೇಶಪ್ಪ ಹರಿಜನ ಮತಯಾಚಿಸಿದರು. ಕಳಸೂರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತ ಕೋರಿದ ಅವರು, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಕಳಸೂರ ಗ್ರಾಮದ ಜಗದೀಶ ಮಂಟಗಣಿ, ಶಂಕರಪ್ಪ ಶಿಂಗಣ್ಣನವರ, ಚನ್ನಬಸವಯ್ಯ ಹಿರೇಮಠ, ಫಕ್ಕೀರೇಶ ಎಮ್ಮಿ ಸೇರಿದಂತೆ ಹಲವರು ಇದ್ದರು.

ಕೆಜೆಪಿ ಅಭ್ಯರ್ಥಿ ಓಲೇಕಾರ ಪರ ಪ್ರಚಾರ
ಹಾವೇರಿ:
ಹಾವೇರಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಅವರ ಪರವಾಗಿ ಬುಧವಾರ ಕೆಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಅನಿತಾ ಸುಬ್ರಮಣ್ಯ ನೇತೃತ್ವದಲ್ಲಿ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಕೆಜೆಪಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲತಾ ಬಡ್ನಿಮಠ, ಉಪಾಧ್ಯಕ್ಷರಾದ ನೀಲಮ್ಮ ಹಂಜಗಿ ಮತ್ತ ಶಶಿಕಲಾ ಕೋಡಿತ್ಕರ, ಪ್ರಧಾನ ಕಾರ್ಯದರ್ಶಿ ಅನುಪಮಾ ಕುಳೇನೂರ, ಕೆಜೆಪಿ ಮುಖಂಡೆ ನಿರ್ಮಲಾ ಗುಮ್ಮಕಾರ, ಸಂಘಟನಾ ಕಾರ್ಯದರ್ಶಿ ಚನ್ನಮ್ಮ ಪಾಟೀಲ, ಶೈಲಜಾ ಆನವಟ್ಟಿ, ರೇಣುಕಾ ಗೌಳಿ, ಸಾಹೀರಾಬಾನು ಬೇಗಂ, ಪಾರ್ವತಿ ಪಾಟೀಲ, ಫಾತಿಮಾ ಹೊಂಬರಡಿ, ಸಂಘಟಕರಾದ ಕಾರ್ತಿಕ ನಂದಿ ಮತ್ತು ಈರಣ್ಣ ನಂದಿ ಪಾಲ್ಗೊಂಡಿದ್ದರು.

ಗುತ್ತಲದಲ್ಲಿ ರುದ್ರಪ್ಪ ಮತಯಾಚನೆ
ಗುತ್ತಲ:
ಹಾವೇರಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರೋಡ ಶೋ ಮೂಲಕ ಮತಯಾಚಿಸಿದರು.

ಪ್ರಚಾರಕ್ಕೂ ಮೊದಲು ಹೇಮಗಿರಿ ಚನ್ನಬಸವೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ, `ಬಿಜೆಪಿ ತನ್ನ  ಆಡಳಿತ ಅವಧಿಯಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಸಮಸ್ತ ಜನತೆಯನ್ನು    ಬಲಿಪಶುಮಾಡಿದೆ' ಎಂದು ಆರೋಪಿಸಿದರು. `ಬಿಜೆಪಿ ಸರ್ಕಾರದಲ್ಲಿದ್ದುಕೊಂಡು    ಅಧಿಕಾರವನ್ನು ಅನುಭವಿಸಿ ಬಿಜೆಪಿ ಪಕ್ಷಕ್ಕೆ ಮೋಸ ಮಾಡಿದ ಯಡಿಯೂರಪ್ಪ ಅವರನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಜನತೆಗೆ ದ್ರೋಹ ಬಗೆದವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು' ಎಂದು ಮನವಿ ಮಾಡಿದರು.

ಸಂದರ್ಭದಲ್ಲಿ ತಾಲ್ಲೂಕು ಗ್ರಾಮೀಣ ಘಟಕದ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ. ಎಸ್.ಎಫ್.ಎನ್. ಗಾಜಿಗೌಡ್ರ, ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ   ಬಸೆಗಣ್ಣಿ, ಜಿ.ಪಂ. ಮಾಜಿ ಸದಸ್ಯ ಕುರವತ್ತಿಗೌಡ್ರ, ಬಿ.ಎಂ.ಕುಲಕರ್ಣಿ, ಶಿವಯ್ಯ ಮೈಲಾರಕಳ್ಳಿಮಠ, ಬಸೀರ್ ಅಹಮ್ಮದ್ ಭಲೇಭಾಯಿ, ಗ್ರಾ.ಪಂ ಅಧ್ಯಕ್ಷೆ ಜಯವ್ವ ಆರಿಕಟ್ಟಿ, ಬಸವರಾಜ ರುದ್ರಾಕ್ಷಿ ಸೇರಿದಂತೆ ಹಲವರು ಹಾಜರಿದ್ದರು.

ಬಿಜೆಪಿ ತಿರಸ್ಕರಿಸಲು ದಿಳ್ಳೇಪ್ಪ ಮನವಿ
ಹಾವೇರಿ:
ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಗೊಬ್ಬರಕ್ಕಾಗಿ ರೈತರು ನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಸರ್ಕಾರ ರೈತರ ಮೇಲೆ ಗೋಲಿಬಾರ್ ಮಾಡಿಸಿತು. ಆದ್ದರಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ರೈತ ಬಾಂಧವರು ಬಿಜೆಪಿಗೆ ಮತ ನೀಡಬಾರದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ದಿಳ್ಳೇಪ್ಪ ಮಣ್ಣೂರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಬೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದರೂ ಕೂಡ ಬಿಜೆಪಿ ಸರ್ಕಾರ ಮಾತ್ರ ಕುರುಡನ ಪಾತ್ರ ವಹಿಸಿದೆ. ಅಲ್ಲದೇ, ರೈತರು ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಬೆಳೆಗಳು ಒಣಗಿದ್ದರೂ ಸರ್ಕಾರ ಯಾವುದೇ ತರಹದ ಬೆಳೆಹಾನಿ ಅಥವಾ ಬೆಳವಿಮಾ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ಶಾಸಕರು ಹಾಗೂ ಸಚಿವರು ಜಿಲ್ಲೆಯ ರೈತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ. ತಮ್ಮ ಸ್ವಾರ್ಥಕ್ಕೆ ಫಲವತ್ತಾದ ರೈತರ ಭೂಮಿಯನ್ನು ಟಾಟಾ ಮಟಾಲಿಕ್ ಕಂಪೆನಿಗೆ ನೀಡಲು ಹೋರಟಿದ್ದಾರೆ. ರೈತರ ಸಮಸ್ಯೆಗಳಿಗೆ ಅರಿಯದ ಬಿಜೆಪಿಗೆ ರೈತರು, ಕೂಲಿಕಾರ್ಮಿಕರು ಮತ ಹಾಕಬಾರದು ಎಂದು ದಿಳ್ಳೇಪ್ಪ ಮನವಿ ಮಾಡಿದ್ದಾರೆ.

ನೀರಾವರಿ, ವಿದ್ಯುತ್ತ, ಶಿಕ್ಷಣ, ರೈತರಿಗೆ ಉತ್ತಮ ಗುಣಮಟ್ಟದ ಮಾರುಕಟ್ಟೆ ಸೌಲಭ್ಯ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಗ್ರಾಮೀಣಾಧಿಭಿವೃದ್ಧಿ, ಉತ್ತಮ ರಸ್ತೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಹೀಗೆ ರೈತರಿಗೆ ಅನುಕೂಲವಾಗುವ ಇತ್ಯಾದಿ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ನಾಡಿಮಿಡಿತ ಅರಿತುವ ಕಾರ್ಯ ಮಾಡುವ ವ್ಯಕ್ತಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಮಣ್ಣೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT