ಯಲಹಂಕ: ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಮಂಜೂರಾಗುವ ಸಂಬಳವನ್ನು ನೇರವಾಗಿ ಚೆಕ್ ಮೂಲಕ ವಿತರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಸಮತಾವಾದ) ರಾಜ್ಯ ಉಪ ಪ್ರಧಾನ ಸಂಚಾಲಕ ಎಚ್. ಮಾರಪ್ಪ ಒತ್ತಾಯಿಸಿದರು.
ಯಲಹಂಕದ ಹಳೇನಗರ ಮತ್ತು ಉಪನಗರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ಹಾಗೂ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಮಹಾಸಂಘದ ನೂತನ ಶಾಖೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ ಸರ್ಕಾರದಿಂದ ಪ್ರತಿ ತಿಂಗಳು 6,930 ರೂಪಾಯಿ ಸಂಬಳ ನಿಗದಿಪಡಿಸಿದ್ದರೂ ಸ್ಥಳೀಯ ಗುತ್ತಿಗೆದಾರರು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಸಂಬಳ ಮೂಲಕ ತಾರತಮ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಸಮವಸ್ತ್ರ, ಶೂ ಮತ್ತು ಕೈಗವಸು ನೀಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸಂಚಾಲಕ ಎಲ್.ಎಂ. ಮುನಿಬೈರಪ್ಪ, ಉಪ ಪ್ರಧಾನ ಸಂಚಾಲಕ ಟಿ.ಚಂದ್ರಪ್ಪ, ಜಿಲ್ಲಾ ಉಪ ಪ್ರಧಾನ ಸಂಚಾಲಕ ಗುರುಸ್ವಾಮಿ, ತಾಲ್ಲೂಕು ಪ್ರಧಾನ ಸಂಚಾಲಕ ಡಿ.ವಿ.ವೀರಭದ್ರೇಗೌಡ, ಮುಖಂಡರಾದ ಬಿ.ಪಿ.ಕೃಷ್ಣಪ್ಪ, ಮುರಳಿ, ಮಹಾ ಸಂಘದ ಯಲಹಂಕ ವಲಯಅಧ್ಯಕ್ಷ ವೆಂಕಟರಮಣಪ್ಪ ಮತ್ತಿತರರು ಹಾಜರಿದ್ದರು.