ವರ್ಷದಿಂದ ವರ್ಷಕ್ಕೆ ಸಿಕ್ಕಾಬಟ್ಟೆ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನ ನಾಲ್ಕನೇ ಆವೃತ್ತಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈಚೆಗೆ ಚಾಲನೆ ನೀಡಿದರು. ಈ ಬಾರಿಯ ಸಿಸಿಎಲ್ನ ಹೊಸ ಆಕರ್ಷಣೆಯೆಂದರೆ ಚೆನ್ನೈ ತಂಡ ರಾಯಭಾರಿಯಾಗಿ ನಟಿ ತ್ರಿಷಾ ಕೃಷ್ಣನ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಿಸಿಎಲ್ ತಂಡದ ರಾಯಭಾರಿಗಳು ಹಾಗೂ ಎಲ್ಲ ತಂಡಗಳ ಆಟಗಾರರು ಪಾಲ್ಗೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರೇರಣೆಯಿಂದ ಆರಂಭವಾದ ಸಿಸಿಎಲ್ ಕೂಡ ಈಗ ಜನಪ್ರಿಯತೆಯ ಹಾದಿಯಲ್ಲಿ ಸಾಗುತ್ತಿದೆ.
‘ವರ್ಷಂ’, ‘ಗಿಲ್ಲಿ’, ‘ಒಕ್ಕಡು’ ಖ್ಯಾತಿಯ ನಟಿ ತ್ರಿಷಾ ಕೃಷ್ಣನ್ ನಮ್ಮ ತಂಡಕ್ಕೆ ರಾಯಭಾರಿಯಾಗಿರುವುದು ತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ’ ಎಂದಿದ್ದಾರೆ ಚೆನ್ನೈ ರೈನೋಸ್ ತಂಡದ ವ್ಯವಸ್ಥಾಪಕರು.
ಸಿಸಿಎಲ್ ನಾಲ್ಕನೇ ಆವೃತ್ತಿಗೆ ಚಾಲನೆ ನೀಡುವ ವೇಳೆ ನಟ ಸಲ್ಮಾನ್ ಖಾನ್ ಮತ್ತು ಅವರ ತಂಡ ಹಾಗೂ ಸಿಸಿಎಲ್ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಈ ವೇಳೆ ಹಾಜರಿದ್ದವು. ಚೆನ್ನೈ ರೈನೋಸ್ ತಂಡವನ್ನು ತಮಿಳು ನಟ ವಿಶಾಲ್ ಕೃಷ್ಣನ್ ಅವರು ಮುನ್ನಡೆಸಲಿದ್ದಾರೆ. ಮೊದಲ ಮತ್ತು ಎರಡನೇ ಸಾರಿ ನಡೆದ ಸಿಸಿಎಲ್ನಲ್ಲಿ ಚೆನ್ನೈ ತಂಡ ಜಯಗಳಿಸಿತ್ತು. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ನ ಮೂರನೇ ಆವೃತ್ತಿಯಲ್ಲಿ ಜಯಭೇರಿ ಭಾರಿಸಿತ್ತು.
ಅಂದಹಾಗೆ, ಈ ಬಾರಿಯ ಸಿಸಿಎಲ್ ಪಂದ್ಯಾವಳಿಗಳು ಚೆನ್ನೈ, ಪುಣೆ, ಹೈದರಾಬಾದ್, ಬೆಂಗಳೂರು ಮತ್ತು ದುಬೈನಲ್ಲಿ ನಡೆಯಲಿದೆ.