ಬೆಂಗಳೂರು: `ಛತ್ತೀಸಗಡದ ಮಾದರಿಯಲ್ಲಿ ರಾಜ್ಯದ ಪಡಿತರ ವಿತರಣೆ ವ್ಯವಸ್ಥೆಯನ್ನು ಉತ್ತಮಗೊಳಿಸಲು ಚಿಂತನೆ ನಡೆದಿದೆ~ ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ಕುಮಾರ್ ಹೇಳಿದರು.
ರಾಜಾಜಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬಿಪಿಎಲ್ ಮತ್ತು ಅಂತ್ಯೋದಯ ಅನ್ನಪೂರ್ಣ ಪಡಿತರ ಚೀಟಿಗಳನ್ನು ವಿತರಿಸಿ ಅವರು ಮಾತನಾಡಿದರು.
`ಛತ್ತೀಸಗಡದ ಮಾದರಿಯಲ್ಲಿ ಯೋಜನೆಯನ್ನು ರೂಪಿಸಿದರೆ, ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿ, ದೇಶದ ಅತ್ಯುತ್ತಮ ಪಡಿತರ ವ್ಯವಸ್ಥೆ ಹೊಂದಿದ ರಾಜ್ಯವಾಗುತ್ತದೆ~ ಎಂದು ಆಶಿಸಿದರು.
`ಛತ್ತೀಸಗಡದಲ್ಲಿ ಪಡಿತರದಾರರಿಗೆ ಲಭ್ಯ ಆಹಾರ ಪದಾರ್ಥಗಳ ಪ್ರಮಾಣ ಮತ್ತು ಪೂರೈಕೆಯಾಗುವ ದಿನಾಂಕ ಮುಂತಾದವುಗಳು ಮೊಬೈಲ್ನ ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ಇದೊಂದು ಜನಸ್ನೇಹಿ ಕಾರ್ಯಕ್ರಮವಾಗಿದ್ದು ಈ ವ್ಯವಸ್ಥೆಯನ್ನು ರಾಜ್ಯದಲ್ಲಿಯೂ ಜಾರಿಗೆ ತರಲು ಇಲಾಖೆಯು ಚಿಂತನೆ ನಡೆಸುತ್ತಿದೆ~ ಎಂದರು.
ಪಡಿತರ ಚೀಟಿ ವಿತರಣೆಯಲ್ಲಿ ಆಗುತ್ತಿರುವ ಗೊಂದಲವನ್ನು ಬಹುತೇಕ ನಿವಾರಿಸಲಾಗಿದೆ. ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವಲ್ಲಿಯೂ ಸಹ ಇದುವರೆಗೂ ಗಣನೀಯ ಪ್ರಗತಿ ಸಾಧಿಸಲಾಗಿದೆ~ ಎಂದು ಹೇಳಿದರು.
ಬಿಬಿಎಂಪಿ ಸದಸ್ಯರಾದ ಕೃಷ್ಣಪ್ಪ, ರವೀಂದ್ರನ್, ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ಹೊಂಬಾಳೆಗೌಡ ಭಾಗವಹಿಸಿದ್ದರು.