ಶ್ರೀರಂಗಪಟ್ಟಣ: ವಿಶ್ವ ಚಾಂಪಿಯನ್ ಪೈ.ದಾರಾಸಿಂಗ್ ಸ್ಮರಣಾರ್ಥ ಪಟ್ಟಣದ ಸೆಂದಿಲ್ ಕೋಟೆ ಆವರಣದಲ್ಲಿ ಶ್ರೀರಂಗ ಕುಸ್ತಿ ಅಭಿಮಾನಿಗಳ ಸಂಘ ಭಾನುವಾರ ಸಂಜೆ ಏರ್ಪಡಿಸಿದ್ದ ಕಾಟಾ ಕುಸ್ತಿ ಪಂದ್ಯಾವಳಿ ಜನಮನ ರಂಜಿಸಿತು.
ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ಜೋಡಿಗಳು ಸೆಣೆಸಾಟ ನಡೆಸಿದವು. ಪಾಲಹಳ್ಳಿಯ ಪೈ.ಮಣಿಕಂಠ ಹಾಗೂ ಗಂಜಾಂ ಪೈ.ಪ್ರವೀಣ್ಕುಮಾರ್ ನಡುವೆ ನಡೆದ ಕಾದಾಟದಲ್ಲಿ ಪೈ.ಮಣಿಕಂಠ ರೋಚಕ ಗೆಲುವು ಸಾಧಿಸಿದರು.
ಕುತೂಹಲ ಕೆರಳಿಸಿದ್ದ ಮತ್ತೊಂದು ಪಂದ್ಯದಲ್ಲಿ ಶ್ರೀರಂಗಪಟ್ಟಣದ ಜಟ್ಟಪ್ಪನವರ ಗರಡಿಯ ಪೈ.ಶ್ರೇಯಸ್ ಅಲಿಯಾಸ್ ಟಮೋಟ ವಿರುದ್ಧ ಪಾಂಡವಪುರದ ಪೈ.ಸಂತೋಷ್ ಗೆಲುವು ಪಡೆದರು. ಕೋಲಾರ ವ್ಯಾಯಾಮ ಶಾಲೆಯ ಪೈ.ಪ್ರಭಾಕರ್ ಯಾದವ್ ಮತ್ತು ನಗುವನಹಳ್ಳಿಯ ಪೈ.ವಿನಯ್ ನಡುವೆ ನಡೆದ ಪಂದ್ಯದಲ್ಲಿ ಪೈ.ವಿನಯ್ ಜಯಗಳಿಸಿದರು.
ಪೈ.ಸುನಿಲ್ ಮತ್ತು ಪೈ.ಸಂತೋಷ್; ಪೈ.ವಿನಯ್ ಮತ್ತು ಪೈ.ಚೇತನ್; ಕುಂಬಾರಕೊಪ್ಪಲಿನ ಪೈ.ರವಿ ಮತ್ತು ಶ್ರೀರಂಗಪಟ್ಟಣದ ಪೈ.ಗಣೇಶ್ ನಡುವೆ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಪೈ.ಪ್ರಕಾಶ್, ಪೈ.ಶ್ರೀಕಂಠು ಇತರರು ತೀರ್ಪುಗಾರರಾಗಿದ್ದರು.
ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸುಬ್ಬಣ್ಣ, ಪುರಸಭೆ ಸದಸ್ಯರಾದ ಗಾಡಿ ರಾಮೇಗೌಡ, ಜಯರಾಂ, ಪೈ.ಬಲರಾಂ, ಪೈ.ಮಹದೇವು, ಎಸ್.ಎಂ.ಮಂಜು, ಪೈ.ರಾಜಣ್ಣ ಇತರರು ಇದ್ದರು. ಶ್ರೀರಂಗಪಟ್ಟಣ ಅಷ್ಟೇ ಅಲ್ಲದೆ ಮಂಡ್ಯ, ಮೈಸೂರು, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಇತರ ಕಡೆಗಳಿಂದಲೂ ಕುಸ್ತಿ ಪ್ರೇಮಿಗಳು ಪಂದ್ಯ ವೀಕ್ಷಿಸಲು ಗಮಿಸಿದ್ದರು.