ಹೊಸಕೋಟೆ: ಪಟ್ಟಣದ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಚನ್ನಬೈರೇಗೌಡ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ರಸ್ತೆ ದಾಟಲು ಸಾರ್ವಜನಿಕರು ಹರಸಾಹಸ ಪಡಬೇಕಿದೆ.
ಹೆದ್ದಾರಿಯ ಇನ್ನೊಂದು ಭಾಗದಲ್ಲಿರುವ ಪಟ್ಟಣದ ಬಹು ದೊಡ್ಡ ಬಡಾವಣೆಯಾದ ವಿಶ್ವೇಶ್ವರಯ್ಯ ಬಡಾವಣೆಗೆ, ಶಾಲಾ ಕಾಲೇಜಿಗೆ ಹೋಗಲು ಸಾರ್ವಜನಿಕರು ಈ ವೃತ್ತದ ಮೂಲಕವೇ ಹೋಗಬೇಕಿದೆ.
ಅಲ್ಲದೆ ಕೋಲಾರ, ಬೆಂಗಳೂರು ಕಡೆ ಹೋಗುವ ಬಸ್ಗಳು, ಹೆದ್ದಾರಿ 207ರಿಂದ ಬರುವ ವಾಹನಗಳು ಇಲ್ಲಿಯೇ ತಿರುವು ಪಡೆಯಬೇಕಿದೆ. ಇಲ್ಲಿ ಬಸ್ ನಿಲ್ದಾಣ ಇಲ್ಲದೇ ಇರುವುದರಿಂದ ಬಸ್ಗಳು ವೃತ್ತದಲ್ಲಿನ ರಸ್ತೆ ಮಧ್ಯದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದೆ.
ಹೀಗಾಗಿ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು ಪಾದಚಾರಿಗಳಿಗೆ ರಸ್ತೆ ದಾಟಲು ಯಾವುದೇ ಪಾದಚಾರಿ ಮಾರ್ಗ ಇಲ್ಲದೆ ವಾಹನಗಳ ಮಧ್ಯೆ ನುಸುಳಿ ಜೀವವನ್ನು ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಿದೆ. ರಸ್ತೆ ಮಧ್ಯದಲ್ಲಿಯೇ ನಿಲ್ಲುವ ಪ್ರಯಾಣಿಕರು ಬಸ್ಗಾಗಿ ಅತ್ತಿಂದಿತ್ತ ಓಡಬೇಕಿದೆ.
ಹೆಂಗಸರು, ಮಕ್ಕಳ ಪಾಡು ಹೇಳತೀರದು. ಹೆದ್ದಾರಿ 207ರ ಕಡೆ ತಿರುವು ಪಡೆಯುವ ರಸ್ತೆಯೂ ಕಿರಿದಾಗಿದ್ದು ಪಾದಚಾರಿಗಳು ಸ್ವಲ್ಪ ಮೈಮರೆತರೆ ವಾಹನಗಳು ಮೈ ಮೇಲೇ ಬರುತ್ತವೆ.