ಲಕ್ಷ್ಮೇಶ್ವರ: ಕೇಂದ್ರ ಸರ್ಕಾರದ ಕನಿಷ್ಠ ಆದೇಶಗಳನ್ನು ಪಾಲಿಸದೆ ಮೊಬೈಲ್ ಕಂಪೆನಿಗಳು ಪಟ್ಟಣದ ಜನವಸತಿ ಪ್ರದೇಶಗಳಲ್ಲಿ ಬೃಹತ್ ಟವರ್ಗಳನ್ನು ನಿಲ್ಲಿಸಿ ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿವೆ.
ಶಾಲೆ ಕಾಲೇಜು ಹಾಗೂ ಜನವಸತಿ ಪ್ರದೇಶದಿಂದ ಟವರ್ಗಳು ಕನಿಷ್ಠ 500 ಮೀಟರ್ ದೂರದಲ್ಲಿ ಇರಬೇಕು ಎಂದು ಕೇಂದ್ರ ಸರ್ಕಾರ ಕಂಪೆನಿಗಳಿಗೆ ಸೂಚನೆ ನೀಡಿದೆ.
ಆದರೆ ಪಟ್ಟಣದಲ್ಲಿ ಮಾತ್ರ ಪ್ರಾಥಮಿಕ ಶಾಲೆ ಪಕ್ಕ ಹಾಗೂ ಜನರು ವಾಸಿಸುವ ಪ್ರದೇಶದಲ್ಲಿಯೇ ಟವರ್ಗಳು ರಾರಾಜಿಸುತ್ತಿವೆ. ಸ್ಥಳೀ ಯ 16ನೇ ವಾರ್ಡ್ನ ಸೋಮೇಶ್ವರ ನಗರದಲ್ಲಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್4ರ ಪಕ್ಕ ನಾಲ್ಕು ಬೃಹತ್ ಟಾವರ್ಗಳು ಕನಿಷ್ಠ ಕಳೆದ ಒಂದೂವರೆ ದಶಕದಿಂದ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಟವರ್ಗಳಿಂದ ಬರುವ ರೇಡಿಯೇಷನ್ ಶಾಲಾ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಭಯ ಇದೆ.
ಮೊದಲು ಪಟ್ಟಣದಲ್ಲಿ ಸಾಕಷ್ಟು ಗುಬ್ಬಿಗಳು ಕಂಡು ಬರುತ್ತಿದ್ದವು. ಆದರೆ ಟವರ್ಗಳ ಗದ್ದಲ ಆರಂಭ ವಾದಾಗಿನಿಂದ ಪಟ್ಟಣದಲ್ಲಿ ಗುಬ್ಬಿಗಳೆ ಮಾಯವಾಗಿವೆ. ಅವು ಕಾಣೆಯಾಗಲು ಟವರ್ಗಳಿಂದ ಹೊರಸೂಸುವ ರೇಡಿಯೇಷನ್ ಕಾರಣ ಎಂದು ತಿಳಿದು ಬಂದಿದೆ.
ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಿಸಬಾರದು ಎಂಬ ನಿರ್ದೇಶನ ಇದ್ದರೂ ಕೂಡ ಸ್ಥಳೀಯ ಪುರಸಭೆ ಅಧಕಾರಿಗಳೂ ಸಹ ಟವರ್ ನಿರ್ಮಿಸಲು ಪರವಾನಿಗೆ ನೀಡಿದ್ದು ಸಂಶಯಕ್ಕೆ ಕಾರಣವಾಗಿದೆ.
ಹಾಗೆಯೇ ಪಿಎಲ್ಡಿ ಬ್ಯಾಂಕಿನ ಹತ್ತಿರ, ಬಜಾರದಲ್ಲಿ ಮನೆಯ ಮಾಳಿಗೆ ಮೇಲೆ ಹೀಗೆ ಎಲ್ಲೆಂದರಲ್ಲಿ ಮೊಬೈಲ್ ಟವರ್ಗಳು ಕಂಡು ಬರುತ್ತಿದ್ದು ಇವು ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ.
ಕಾರಣ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಮೊಬೈಲ್ ಕಂಪೆನಿಗಳಿಗೆ ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಿಸದಂತೆ ಕಟ್ಟುನಿಟ್ಟಾಗಿ ತಿಳಿಸುವ ಅಗತ್ಯ ಇದ್ದು ಶಾಲೆ ಪಕ್ಕದಲ್ಲಿನ ಟಾವರ್ನ್ನು ಈ ಕೂಡಲೇ ಬೇರಡೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಜನರು ಆಗ್ರಹಸಿದ್ದಾರೆ.