ಬೆಂಗಳೂರು: ‘ಕುಲಾಂತರಿ (ಜಿ.ಎಂ) ತಳಿ ತಂತ್ರಜ್ಞಾನವನ್ನು ಕುರುಡಾಗಿ ವಿರೋಧಿಸದೆ, ಬರದ ಹೊಡೆತವನ್ನು ತಾಳಬಲ್ಲಂತಹ ತಳಿಗಳ ಅಭಿವೃದ್ಧಿಗಾಗಿ ಅದನ್ನು ಬಳಸಬೇಕು’ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಭಾರತೀಯ ವಿಜ್ಞಾನಿಗಳಿಗೆ ಸಲಹೆ ನೀಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಈಚೆಗೆ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು ಈ ಸಲಹೆಯನ್ನು ಕೊಟ್ಟರು.
‘ರಾಸಾಯನಿಕ ಪ್ರಭಾವವನ್ನೂ ಮೀರಿ ಪೌಷ್ಟಿಕಾಂಶಯುಕ್ತ ಧಾನ್ಯವನ್ನು ಬೆಳೆಯುವಂತಹ ತಳಿಗಳ ಅಭಿವೃದ್ಧಿಗೂ ಕುಲಾಂತರಿ ತಂತ್ರಜ್ಞಾನವನ್ನು ಬಳಕೆ ಮಾಡಬಹುದು. ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಬೇಕು’ ಎಂದು ಹೇಳಿದರು.
‘ಯೂರೋಪ್ನಲ್ಲಿ ರಾಜಕೀಯ ಕಾರಣಗಳಿಗಾಗಿ ಕುಲಾಂತರಿ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ಭಾರತೀಯ ವಿಜ್ಞಾನಿಗಳು ಅವರ ಹಾದಿಯಲ್ಲಿ ಸಾಗುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು. ‘ಯೂರೋಪ್ನಲ್ಲಿ ಕುಲಾಂತರಿ ತಳಿಗಳನ್ನು ವಿರೋಧಿಸುವವರು ತಾಂತ್ರಿಕವಾಗಿ ಪ್ರಸ್ತುತ ಸನ್ನಿವೇಶದ ಮಾಹಿತಿಯನ್ನು ಪಡೆದಿಲ್ಲ. ಹಿಂದಿನ ಮಾಹಿತಿ ಹಿಡಿದುಕೊಂಡು ಸಮಸ್ಯೆ ಬಗೆಗೆ ಅವರು ಬಿಂಬಿಸುತ್ತಿದ್ದಾರೆ. ಆದರೆ, ಸಂಶೋಧನೆಗಳಿಂದ ಸುಧಾರಣೆಯಾಗಿದ್ದು, ಅವರು ಪ್ರತಿಪಾದಿಸುವ ಸಮಸ್ಯೆ ಈಗ ಇಲ್ಲವೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.
‘ಕುಲಾಂತರಿ ತಳಿಗಳಲ್ಲಿ ಏನಾದರೂ ಅಪಾಯ ಇದೆಯೇ ಎನ್ನುವುದನ್ನು ಸರಿಯಾದ ಪರೀಕ್ಷೆ ಮೂಲಕ ಮನವರಿಕೆ ಮಾಡಿಕೊಳ್ಳಬೇಕು ಎಂಬುದನ್ನು ನಾನೂ ಒಪ್ಪುತ್ತೇನೆ. ತಂತ್ರಜ್ಞಾನವನ್ನು ಜಾಗೃತಿಯಿಂದ ಬಳಸುವ ಅಗತ್ಯವಿದೆ. ಹಾಗೆಂದ ಮಾತ್ರಕ್ಕೆ ನಾವು ತಂತ್ರಜ್ಞಾನವನ್ನೇ ಬಳಸುವುದಿಲ್ಲ ಎನ್ನುವುದು ಪ್ರಮಾದ’ ಎಂದು ಹೇಳಿದರು.
‘ಬಹುರಾಷ್ಟ್ರೀಯ ಕಂಪೆನಿಗಳನ್ನು ವಿರೋಧಿಸುವ ಉದ್ದೇಶದಿಂದಲೇ ಕುಲಾಂತರಿ ತಳಿಗಳ ವಿರುದ್ಧ ಅಪಸ್ವರ ಎತ್ತಲಾಗುತ್ತಿದೆ’ ಎಂದ ಅವರು, ‘ಕೃಷಿ ವಿಶ್ವವಿದ್ಯಾಲಯಗಳು ಜನರಿಗೆ ಸರಿಯಾದ ಮಾಹಿತಿ ಕೊಡಬೇಕು ಮತ್ತು ಸಮಸ್ಯೆ ಪರಿಹರಿಸುವ ತಂತ್ರಜ್ಞಾನಗಳ ಬಗೆಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು’ ಎಂದು ತಿಳಿಸಿದರು.ಕುಲಪತಿ ಡಾ.ಕೆ. ನಾರಾಯಣಗೌಡ ಹಾಜರಿದ್ದರು.