ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಕೆರೆಯಲ್ಲಿ ಹೆಚ್ಚುವರಿಯಾದ ನೀರು ಅಕ್ಕಪಕ್ಕದ ಹತ್ತಾರು ಎಕರೆ ಜಮೀನಿಗೆ ನುಗ್ಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಈ ಕೆರೆಯ ಹೂಳನ್ನು ಈಚೆಗೆ ತೆಗೆಯಲಾಗಿತ್ತು. ಇದಕ್ಕೆ ಎಲ್ಲೆಯನ್ನೂ ಗುರುತಿಸಿ ಬಂಡ್ ಕಟ್ಟಲಾಗಿತ್ತು. ಕೆರೆಗೆ ಕಬಿನಿ ಕಾಲುವೆಯಿಂದ ನೀರು ತುಂಬಿಸಲಾಗಿತ್ತು. ಆದರೆ, ನೀರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿತ್ತು. ಜೊತೆಗೆ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ನೀರೂ ಕೆರೆಗೆ ಸೇರಿದ್ದರಿಂದ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಯಿತು.
ಹೆಚ್ಚುವರಿ ನೀರನ್ನು ತೂಬಿನ ಮೂಲಕ ಹೊರಕ್ಕೆ ಹರಿಯ ಬಿಡದಿರುವುದರಿಂದ ಕೆರೆಯ ಒಂದು ಬದಿಯ ಜಮೀನುಗಳಿಗೆ ನೀರು ನುಗ್ಗಿದೆ. ನಾಟಿ ಮಾಡಲಾಗಿದ್ದ ಭತ್ತದ ಪೈರು ಸಂಪೂರ್ಣವಾಗಿ ಮುಳುಗಿ ಹೋಗಿದೆ.
`ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ಈ ಭಾಗದ ಜಮೀನಿನಲ್ಲಿ ನೀರು ತುಂಬಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ರೈತರಾದ ಮಹದೇವಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ, ಸ್ವಾಮಿ ದೂರಿದ್ದಾರೆ.
ಇಲಾಖೆಯ ಎಂಜಿನಿಯರ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಹೆಚ್ಚುವರಿ ನೀರನ್ನು ತೂಬಿನ ಮೂಲಕ ಹೊರಕ್ಕೆ ಬಿಟ್ಟಿದ್ದಾರೆ.