ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮುವಿನಲ್ಲಿ ನಗರ ತರಕಾರಿ ಒಕ್ಕೂಟ: ರೈತ ಹಿತಕ್ಕಾಗಿ ಸರ್ಕಾರಿ ಕ್ರಮ

Last Updated 18 ಜುಲೈ 2012, 10:15 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಆದಾಯ ತಂದುಕೊಡಲು ನೆರವಾಗುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 20 ನಗರ ತರಕಾರಿ ಒಕ್ಕೂಟಗಳನ್ನು ಅಭಿವೃದ್ಧಿ ಪಡಿಸಲಿದೆ.

ಜಮ್ಮು ಜಿಲ್ಲೆಯಲ್ಲಿ ನಗರ ತರಕಾರಿ ಒಕ್ಕೂಟಗಳಿಗಾಗಿ 15 ಸ್ಥಳಗಳನ್ನು ಕೃಷಿ ಇಲಾಖೆಯು ಗುರುತಿಸಿದೆ. ಉಳಿಕ ನಗರ ತರಕಾರಿ ಒಕ್ಕೂಟಗಳನ್ನು ಜಮ್ಮು ವಿಭಾಗದ ಇತರ ಜಿಲ್ಲೆಗಳಲ್ಲಿ ತೆರೆಯಲಾಗುವುದು ಎಂದು ಕೃಷಿ ಸಚಿವ ಗುಲಾಂ ಹಸನ್ ಮೀರ್  ಇಲ್ಲಿ ಹೇಳಿದರು.

ರಾಷ್ಟ್ರೀಯ ಕೃಷಿ ಯೋಜನೆಯ ಉಪ ಯೋಜನೆಯಾಗಿ ಆರಂಭಿಸಿರುವ ನಗರ ತರಕಾರಿ ಒಕ್ಕೂಟಗಳಿಗಾಗಿ ರಾಷ್ಟ್ರೀಯ ಕೃಷಿ ಉಪಕ್ರಮ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ರೈತರಿಗೆ ತಮ್ಮ ಉತ್ಪಾದನೆಗಳಿಗೆ ಗರಿಷ್ಠ ಆದಾಯ ಲಭಿಸುವಂತೆ ಮಾಡಲು ಹಲವಾರು ನೂತನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೃಷಿ ಕೇಂದ್ರವನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ನುಡಿದರು.

ಯೋಜನೆಯ ಮುಖ್ಯ ಉದ್ಧೇಶ ತರಕಾರಿ ಉತ್ಪಾದನೆಯನ್ನು ಹೆಚ್ಚಿಸುವುದು, ಕೃಷಿ ಉತ್ಪನ್ನ ಆಧಾರಿತ ಒಕ್ಕೂಟಗಳನ್ನು ಅಭಿವೃದ್ಧಿ ಪಡಿಸುವುದು, ದಕ್ಷ ಸರಬರಾಜು ಸರಪಳಿ ಮೂಲಕ  ಉತ್ತಮ ಗುಣಮಟ್ಟದ ತರಕಾರಿ ಲಭಿಸುವಂತೆ ಮಾಡುವುದು, ತನ್ಮೂಲಕ ಉದ್ಯೋಗಾವಕಾಶ ಹೆಚ್ಚಿಸುವುದು, ಉತ್ಪಾದನೆ ಹೆಚ್ಚಳಕ್ಕೆ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಬೇಡಿಕೆ- ಸರಬರಾಜು ನಡುವಣ ಅಂತರ ನಿವಾರಿಸುವುದು ಎಂದು ಮೀರ್ ವಿವರಿಸಿದರು.

ಸಹಕಾರ ಸಂಸ್ಥೆಗಳ ಮಾದರಿಯಲ್ಲಿ ರೈತ ಉತ್ಪಾದನಾ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ ರೈತರು ತಮ್ಮ ಉತ್ಪಾದನಾ ವೆಚ್ಚವನ್ನು ತಗ್ಗಿಸುವುದರ ಜೊತೆಗೆ ತಮ್ಮ ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ಅವರು ನುಡಿದರು.

ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ದರ ಪಡೆಯಲು ಮಾರುಕಟ್ಟೆ ತಂತ್ರಗಳನ್ನು ರೈತರು ಬಳಸಬೇಕು. ಹಾಗೆಯೇ ವೆಚ್ಚ ಇಳಿಕೆಗಾಗಿ ಜೈವಿಕ ಗೊಬ್ಬರಗಳನ್ನು ಬಳಸಬೇಕು. ಕಡಿಮೆ ವೆಚ್ಚದ ಜೈವಿಕ ಗೊಬ್ಬರಗಳನ್ನು ಜನಪ್ರಿಯಗೊಳಿಸಲು ಇಲಾಖೆಗಳು ಶ್ರಮಿಸಬೇಕು ಎಂದು ಅವರು ಹೇಳಿದರು.

ಕೃಷಿಯನ್ನು ಲಾಭದಾಯಕ ಹಾಗೂ ಸುಭದ್ರಗೊಳಿಸುವ ಮೂಲಕ ಯುವಕರು ಕೃಷಿಯನ್ನು ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದು ಇಲಾಖೆಯ ಕಾಳಜಿಯಾಗಬೇಕು ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT