ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರದು ಅತಿರೇಕದ ರಾಜಕಾರಣವಾಗುತ್ತಿದೆ. ಇತ್ತ ಕಾವೇರಿ ವಿವಾದವನ್ನು ಮತ್ತೆ ಮತ್ತೆ ಕೆದಕಿ ಜೀವಂತ ಇಡುವುದು; ಅತ್ತ ಶ್ರೀಲಂಕಾದಲ್ಲಿ ತಮಿಳರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕೆಂದು ಒತ್ತಾಯಿಸುವುದು; ಹಾಗೆ ಲಂಕಾ ಆಟಗಾರರು ಚೆನ್ನೈನ ಐಪಿಎಲ್ ಟ್ವೆಂಟಿ - 20 ಪಂದ್ಯಗಳಲ್ಲಿ ಆಡಬಾರದೆಂದು ನಿರ್ಬಂಧಿಸುವುದು ಇತ್ಯಾದಿ ... ಅವರ ಬೆದರಿಕೆ ತಂತ್ರಗಳು.
ಇವರ ನಡೆ ಕೇಂದ್ರಕ್ಕೆ ಮುಜುಗರ ಹಾಗೂ ಸವಾಲಾಗಿ ಪರಿಣಮಿಸುತ್ತಿದೆ. ತಮಿಳು ಭಾಷಿಗರ ಅಭಿಮಾನ ಗಳಿಸುವುದು ಮತ್ತು ಕೆರಳಿಸುವುದು. ಈ ಎಲ್ಲದರ ಹಿಂದಿರುವುದು ರಾಜಕಾರಣ. ಕಳೆದ 25-30 ವರ್ಷ ಪರ್ಯಂತ ಲಂಕಾದಲ್ಲಿ ಎಲ್ಟಿಟಿಇ ಸಂಘಟನೆಯ ಹೋರಾಟಗಾರರು ಮಾರಣ ಹೋಮವಾಗಿ ಬಿಟ್ಟರು.
ಈಗ ಲಂಕಾದಲ್ಲಿ ತಮಿಳು ಪ್ರತ್ಯೇಕ ರಾಷ್ಟ್ರ ಆಗಲಿ ಎಂದು ವಿಶ್ವಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ನಿರ್ಣಯ ಮಂಡಿಸಲಿ ಎಂದು ಒತ್ತಾಯಿಸುತ್ತಿರುವ ಜಯಲಲಿತಾ ಅವರಿಗೆ ತನ್ನ ಬೇಳೆ ಬೇಯಿಸಿಕೊಳ್ಳಬೇಕೆಂಬ ಇರಾದೆ. ಈ ಒತ್ತಾಯದ ಹಿಂದೆ ತಮಿಳು ವೋಟುಗಳನ್ನು ಗಿಟ್ಟಿಸಿಕೊಳ್ಳುವ ರಾಜಕಾರಣ ಇದೆ ಎಂದು ಬೇರೆ ಹೇಳಬೇಕಾಗಿಲ್ಲ.
ಇನ್ನಾದರೂ ಕೇಂದ್ರ ಕ್ರಮ ಕೈಗೊಂಡು ಲಂಕಾ ಆಟಗಾರರು ಚೆನ್ನೈನಲ್ಲಿ ಆಡುವಂತಾಗಬೇಕೆಂದೂ ಏನಾದರೂ ಅವಘಡ ಸಂಭವಿಸಿದರೆ ಮುಖ್ಯಮಂತ್ರಿಯೇ ಹೊಣೆಗಾರರೆಂದೂ ನಿರ್ದೇಶನ ನೀಡಲಿ.