ಸೊರಬ: ಅರಣ್ಯ ಎಂದರೆ ಕೇವಲಗಿಡ, ಮರ ಬೆಳೆಯುವುದಲ್ಲ. ಜಲರಕ್ಷಣೆಯು ಇದಕ್ಕೆ ಪೂರಕವಾದ ಒಂದು ಅಂಶವಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ತಾಲ್ಲೂಕಿನ ಆನವಟ್ಟಿ ತಿಮ್ಮಪ್ಪನ ಗುಡ್ಡದಲ್ಲಿ ಶನಿವಾರ ತಿಮ್ಮಪ್ಪ ದೇವಾಲಯ ಸಮಿತಿ ಸದಸ್ಯರು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಅರಣ್ಯ ರಕ್ಷಣೆ ಹಾಗೂ ಸ್ಥಳ ಪರಿಶೀಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೈಸರ್ಗಿಕ ಹಾಗೂ ಪಾರಂಪರಿಕ ವೃಕ್ಷಗಳಾದ ಅರಳಿ, ಆಲ, ಬಿಲ್ವ ಮುಂತಾದ ವೃಕ್ಷಗಳೊಂದಿಗೆ ಹೆಚ್ಚು ಬೆಲೆಬಾಳುವ ಕಾಡು ಜಾತಿಯ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಹಸಿರು ಹಬ್ಬ ನಡೆಸಿ ಜನರಲ್ಲಿ ಅರಣ್ಯ, ಜಲ ರಕ್ಷಣೆ ಬಗ್ಗೆ ಕಾರ್ಯಾಗಾರ ನಡೆಸಿ ಆಸಕ್ತಿ ಮೂಡಿಸುವಲ್ಲಿ ಗ್ರಾಮ ಅರಣ್ಯ ಸಮಿತಿ ಹಾಗೂ ಗ್ರಾಮರಂಗ ಸಮಿತಿ ಮುಂದಾಗಬೇಕು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಚಂದ್ರಶೇಖರ ಮಾತನಾಡಿ, ಈ ಭಾಗದ ಸುತ್ತಮುತ್ತಲಿನ ಸರ್ವೇ ನಂ.: 7, 29 ಹಾಗೂ 306ರಲ್ಲಿ ಅರಣ್ಯ ಪ್ರದೇಶವಿದ್ದು, ಸುಮಾರು 50 ಎಕರೆ ಕೆಎಫ್ಡಿಸಿಗೆ ಗುತ್ತಿಗೆ ನೀಡಲಾಗಿದೆ ಎಂದು ತಿಳಿಸಿದರು.
ರಾಘವೇಂದ್ರ ಭೀಮನಕೋಣೆ, ವಲಯ ಅರಣ್ಯಾಧಿಕಾರಿ ಕೃಷ್ಣೇಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಮಂಜಪ್ಪ, ದಯಾನಂದ ಗೌಡ, ದೇವಸ್ಥಾನ ಸಮಿತಿಯ ಎ.ಎಲ್. ಅರವಿಂದ, ಶ್ರೀಪಾದ ರಾವ್, ಕೃಷ್ಣಮೂರ್ತಿ, ಗುಡ್ಡಪ್ಪ, ರಾಜು ಬಡಿಗೇರ್ ಇದ್ದರು.