ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಹೋಬಳಿಯ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯ ಶುಕ್ರವಾರ ಭರ್ತಿಯಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮೂಡಿದೆ.
ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ, ಸರಿಯಾಗಿ ಮಳೆ ಬರಲಿಲ್ಲ. ಇದರಿಂದ ರೈತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಎಂಟು ದಿನಗಳಿಂದ ಸುರಿಯುತ್ತಿರುವ ಉತ್ತರಿ ಮಳೆಯ ಅರ್ಭಟಕ್ಕೆ ಹಸಿರು ಬೆಟ್ಟಗಳ ಮಧ್ಯೆ ಇರುವ ಜಲಾಶಯ ತುಂಬಿದೆ.
ಹತ್ತಿಕುಣಿ, ಯಡ್ಡಳ್ಳಿ, ಕಟಗಿ ಶಹಾಪುರ, ಬಂದಳ್ಳಿ ಹಾಗೂ ಹೊನಗೇರಾ ಗ್ರಾಮದ ಸುಮಾರು 5,300 ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಒದಗುತ್ತದೆ. ಜಿಲ್ಲಾ ಕೇಂದ್ರದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಜಲಾಶಯ ಭರ್ತಿಯಾಗಿರುವ ಸುದ್ದಿ ತಿಳಿದು ಸುತ್ತಲಿನ ಗ್ರಾಮದ ಜನತೆ ಜಲಾಶಯಕ್ಕೆ ಆಗಮಿಸಿ ಜಲಾಶಯದ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡರು.
ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವುದರಿಂದ 5 ಗೇಟ್ಗಳನ್ನು ತೆರೆದು ಹಳ್ಳಕ್ಕೆ ನೀರು ಬೀಡಲಾಗುತ್ತಿದೆ ಎಂದು ಸ್ಥಳದಲ್ಲಿಯೇ ಇದ್ದ ಜಲಾಶಯದ ಸಹಾಯಕ ಎಂಜಿನಿಯರ್ ಬಸವರಾಜ ತೊಟ್ಲೂರ್ ತಿಳಿಸಿದರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಜಲಾಶಯಕ್ಕೆ ಭೇಟಿ ನೀಡಿ, ನಿಸರ್ಗ ಸೌಂದರ್ಯವನ್ನು ಸವಿದು, ದಿನವಿಡೀ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಪಕ್ಕದಲ್ಲಿಯೇ ತೋಟಗಾರಿಕೆ ಇಲಾಖೆಯ ವಿಶಾಲವಾದ ತೋಟವಿದೆ.
ಜಿಲ್ಲಾಡಳಿತ ಜಲಾಶಯ ಮುಂಭಾಗದಲ್ಲಿ ಉದ್ಯಾನ ನಿರ್ಮಾಣ ಮಾಡಿ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮದ ವೈಜನಾಥರಡ್ಡಿ ಪಾಟೀಲ್ ಒತ್ತಾಯಿಸಿದ್ದಾರೆ.