ಬೆಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿ ಕೊಳ್ಳಲು ಬಿಜೆಪಿ ನಾಯಕರೇ ಸಿದ್ಧರಿಲ್ಲ. ಹೀಗಿರುವಾಗ ದೇಶದ ಜನತೆ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಪ್ರಶ್ನಿಸಿದ್ದಾರೆ.
‘ವ್ಯಕ್ತಿಗಿಂತ ಪಕ್ಷ ಮೇಲು ಎನ್ನುತ್ತಿದ್ದ ಬಿಜೆಪಿ ಈಗ ಎಲ್ಲರಿಗಿಂತಲೂ ಮೋದಿ ಮೇಲು ಎಂದು ಹೇಳುತ್ತಿದೆ. ಇದು ಬಿಜೆಪಿಯ ಅಧಃಪತನವನ್ನು ಎತ್ತಿ ತೋರುತ್ತಿದೆ. ಶಾಂತಿ ಮಂತ್ರ ಜಪಿಸುವ ದೇಶದಲ್ಲಿ ಶಾಂತಿ ಕದಡುವ ಮೋದಿ ಅವರಂತಹ ವ್ಯಕ್ತಿಯನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿರುವುದು ದೊಡ್ಡ ದುರಂತ’ ಎಂದು ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
’2002ರಲ್ಲಿ ಗುಜರಾತ್ನಲ್ಲಿ ನರಮೇಧ ನಡೆಸಿದ ಆರೋಪ ಎದುರಿಸುತ್ತಿರುವ ಮೋದಿ ಅವರನ್ನು ಬಾಬ್ರಿ ಮಸೀದಿ ಧ್ವಂಸದ ಆರೋಪದ ಕಳಂಕ ಅಂಟಿಸಿಕೊಂಡಿರುವ ಎಲ್.ಕೆ.ಅಡ್ವಾಣಿ ಅವರು ವಿರೋಧಿಸುತ್ತಿದ್ದಾರೆ. ಇದು ಒಂದು ರೀತಿಯ ಅಪಹಾಸ್ಯ’ ಎಂದು ಲೇವಡಿ ಮಾಡಿದ್ದಾರೆ.