‘ನನ್ನ ಮತ್ತು ಜಿ.ಎಸ್.ಶಿವರುದ್ರಪ್ಪ ಅವರ ಒಡನಾಟ 60 ವರ್ಷಗಳಷ್ಟು ಹಿಂದಿನದು. ಧಾರವಾಡಕ್ಕೆ ಬಂದರೆಂದರೆ ನಮ್ಮ ಮನೆಯಲ್ಲೇ ವಾಸ್ತವ್ಯ ಮಾಡುತ್ತಿದ್ದರು. ನನ್ನ ಅವರ ಒಡಲು ಎರಡಾಗಿದ್ದರೂ ಜೀವ ಒಂದೇ ಆಗಿತ್ತು’.
– ಚೆನ್ನವೀರ ಕಣವಿ
‘ಕುವೆಂಪು ಅವರ ಆದರ್ಶಗಳನ್ನು ಅಕ್ಷರಶಃ ಪಾಲಿಸಿದ ಶಿಷ್ಯರು ಡಾ.ಜಿ.ಎಸ್. ಶಿವರುದ್ರಪ್ಪ. ಗುರುಗಳ ವೈಚಾರಿಕ ದೃಷ್ಟಿ, ಅನಿಕೇತನ ಪ್ರಜ್ಞೆಯನ್ನು ಬದುಕು ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡರು. ಕುವೆಂಪು ಬಳಿಕ ರಾಷ್ಟ್ರಕವಿ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟು ನಿಜವಾದ ಉತ್ತರಾಧಿಕಾರಿಯಾದರು...’
– ಸಿಪಿಕೆ
ಅವರೊಬ್ಬ ಘನವೆತ್ತ ಪ್ರಾಧ್ಯಾಪಕ, ಸರ್ವಶ್ರೇಷ್ಠ ಸಂಘಟಕ, ಉತ್ತಮ ಕವಿಯಾಗಿಯೂ ಉತ್ತಮ ವಿಮರ್ಶೆ, ಗಟ್ಟಿತನದ ಗದ್ಯಗಳನ್ನು ಬರೆಯಬಲ್ಲ ಸಮರ್ಥ.
–ಡಾ.ಎಂ.ಎಂ.ಕಲಬುರ್ಗಿ
‘ನನಗೆ ಆರಂಭದಿಂದಲೂ ವಿಜ್ಞಾನದ ಬಗ್ಗೆ ಆಸಕ್ತಿ. ನನ್ನ ಒಲವನ್ನು ಕನ್ನಡ ಸಾಹಿತ್ಯದ ಕಡೆಗೆ ತಿರುಗಿಸಿದವರು ಜಿ.ಎಸ್.ಎಸ್. 1955–56ರಲ್ಲಿ ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ಪ್ರಭಾವದಿಂದ ಜೀವನ ಪರ್ಯಂತ ಬ್ರಹ್ಮಚಾರಿ ಆಗಿ ಉಳಿಯಲು ನಿರ್ಧರಿಸಿದ್ದೆ. ಪೋಷಕರ ಕೋರಿಕೆಗೆ ಮೇರೆಗೆ ನನ್ನ ಮನ ಒಲಿಸಿ ನಿರ್ಧಾರ ಬದಲಿಸಿದವರು ಜಿ.ಎಸ್.ಎಸ್.’
–ಡಾ.ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ
‘ಜಿ.ಎಸ್.ಎಸ್. ರಂಗ ಚಳವಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಪ್ರಾಧ್ಯಾಪಕರಾಗಿದ್ದಾಗ ವಿವಿಧ ವಿಭಾಗಗಳನ್ನು ಕಟ್ಟಿ ರಂಗಭೂಮಿ ಹಾಗೂ ಸಾಹಿತ್ಯ ಬೆಳವಣಿಗೆಗೆ ಉತ್ತೇಜನ ನೀಡಿದರು. ಕನ್ನಡಕ್ಕೆ ಬೌದ್ಧಿಕ ದಿಕ್ಕು ತೋರಿದ ಮಹಾನ್ ಚೇತನ’.
– ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
‘ಸಾಮಾಜಿಕ ಅಧ್ಯಾತ್ಮವನ್ನು ತಮ್ಮ ನಿಲುವಿನಿಂದಲೇ ನಮ್ಮೆಲ್ಲರ ಮನಸ್ಸಿನಲ್ಲಿ ಬಿತ್ತಿದ್ದ ಮಮತೆಯ ಹಿರಿಕ ಅವರು’.
– ಜಯಂತ ಕಾಯ್ಕಿಣಿ, ಕವಿ
‘ಜಿ.ಎಸ್.ಎಸ್.ಪ್ರಗತಿಪರ ಧೋರಣೆ ಹೊಂದಿದ್ದರು. ಕುವೆಂಪು ಅವರು ವೈಚಾರಿಕ ಧೋರಣೆ ಹೊಂದಿದ್ದರೆ, ಜಿ.ಎಸ್.ಎಸ್ ಸಾಹಿತ್ಯ ವೈಚಾರಿಕ ಹಾಗೂ ಪ್ರಗತಿಪರ ಧೋರಣೆಯಿಂದ ಕೂಡಿತ್ತು. ಅವರು ಕಂದಾಚಾರ ಹಾಗೂ ಮೂಢನಂಬಿಕೆಗಳ ವಿರೋಧಿ ಆಗಿದ್ದರು’.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.