ಭಟ್ಕಳ: ತಾಲ್ಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯಿಂದ ಎಲ್ಲೆಡೆ ತಂಪಾದ ವಾತಾವರಣ ನಿರ್ಮಾಣವಾಗಿದ್ದು, ಸೆಖೆಯಿಂದ ಬಳಲುತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮಳೆ ಬಿಟ್ಟು-ಬಿಟ್ಟು ಸಣ್ಣದಾಗಿ ಬರುತ್ತಿದ್ದು, ಬತ್ತಿರುವ ಕೆರೆ, ಬಾವಿಗಳು ಯಥಾಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಮಾಡುತ್ತಿರುವ ನೀರು ಸರಬರಾಜು ಮುಂದುವರಿದೇ ಇದೆ.
ಹೆದ್ದಾರಿ ಸೇರಿದಂತೆ ಹೆಚ್ಚಿನ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆಯ ಕೆಂಪು ನೀರು ರಸ್ತೆಗಳ ಇಕ್ಕೆಲಗಳಲ್ಲಿ ತುಂಬಿಕೊಂಡು ಕೆಸರಿನ ರಾಡಿ ಸೃಷ್ಟಿಸಿದೆ. ಇಲ್ಲಿನ ಬಸ್ನಿಲ್ದಾಣದ ಎರಡೂ ಕಡೆಯ ಪ್ರವೇಶ ದ್ವಾರದಲ್ಲಿರುವ ಬೃಹತ್ ಹೊಂಡದಲ್ಲಿ ಮಳೆಯ ಕೆಂಪು ನೀರು ತುಂಬಿಕೊಂಡಿರುವ ಪರಿಣಾಮ ನಿಲ್ದಾಣಕ್ಕೆ ಬರುವ ಬಸ್ಗಳು ಕುಂಟುತ್ತ, ಏಳುತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸ್ಥಳೀಯ ಪುರಸಭೆ ಅಲ್ಲಲ್ಲಿ ಗಟಾರ ಹೂಳೆತ್ತುವ ಕಾರ್ಯವನ್ನು ಆರಂಭಿಸಿದೆ. ಡೆಂಗೆ ಸೇರಿದಂತೆ ವಿವಿಧ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಫಾಗಿಂಗ್ ಸಹ ನಡೆಸುತ್ತಿದೆ. ಕೃಷಿಭೂಮಿಗಳಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.