ಚಿತ್ರದುರ್ಗ: ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕೆಡಿಪಿ ಸಭೆಗೆ ಸಚಿವರು ತಡವಾಗಿ ಆಗಮಿಸಿರುವುದನ್ನು ಖಂಡಿಸಿ ಶಾಸಕರಾದ ಡಿ.ಸುಧಾಕರ್ ಮತ್ತು ಗೂಳಿಹಟ್ಟಿ ಡಿ. ಶೇಖರ್ ಶನಿವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ಬಹಿಷ್ಕಾರ ಹಾಕಿದ ಪ್ರಸಂಗ ನಡೆಯಿತು.
ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿದ್ದರೆ ಡಿ. ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್ 11.45ರ ಸುಮಾರಿಗೆ ಆಗಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ ವಸಂತ ಅಸ್ನೋಟಿಕರ್ ಒಂದೂವರೆ ಗಂಟೆ ತಡವಾಗಿ ಸಭೆಗೆ ಆಗಮಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಅಧಿಕಾರಿಗಳು ಸಭೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಜಿಲ್ಲೆಯಲ್ಲಿ ಬರಪರಿಸ್ಥಿತಿ ನಿರ್ವಹಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿ, ಶಾಸಕರಿಬ್ಬರೂ ಸಭೆಯನ್ನು ಬಹಿಷ್ಕರಿಸಿದರು.