ದಾವಣಗೆರೆ: ಉಪಯೋಗಿಸಿ ಬಿಸಾಡಿದ ಜಿಲಿಟಿನ್ ಕಡ್ಡಿಗಳನ್ನು ಸುಡಲು ಹೋದ ಸಂದರ್ಭದಲ್ಲಿ ಅವು ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹಳೇಪೇಟೆಯ ಬಿ.ಟಿ. ಲೇಔಟ್ನ ದೊಗ್ಗಳ್ಳಿ ಕಾಂಪೌಂಡ್ನಲ್ಲಿ ಬುಧವಾರ ನಡೆದಿದೆ.
ಭಾರತ್ ಕಾಲೊನಿಯ ಜಗದೀಶ್ (22) ಗಾಯಗೊಂಡ ವ್ಯಕ್ತಿ. ಕಲ್ಲು ಕ್ವಾರಿಗಳಲ್ಲಿ ಲಘು ಸ್ಫೋಟಕ್ಕೆ ಬಳಸಿ ಬಿಸಾಡಿದ ಜಿಲಿಟಿನ್ ಕಡ್ಡಿಗಳನ್ನು ಸಂಗ್ರಹಿಸಿ, ಅವುಗಳನ್ನು ದೊಗ್ಗಳ್ಳಿ ಕಾಂಪೌಂಡ್ನ ಖಾಲಿ ಜಾಗದಲ್ಲಿ ತಂದ ಜಗದೀಶ್, ಅವುಗಳಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹಚ್ಚಿದ ಸ್ವಲ್ಪ ಸಮಯದಲ್ಲೇ ಅಲ್ಲಿ ಸ್ಫೋಟ ಸಂಭವಿಸಿದೆ. ಇದರಿಂದ ಆತನ ಮುಖ, ಕೈಗಳಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಜಗದೀಶನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ಆಜಾದ್ ನಗರ ಠಾಣೆಯಲ್ಲಿ ದಾಖಲಾಗಿದೆ.