ಕಾರವಾರ: ಶಾಸಕ ಆನಂದ ಅಸ್ನೋಟಿಕರ್ ಶುಕ್ರವಾರ ಇಲ್ಲಿಯ ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯ, ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.
ಮಹಿಳೆಯರ, ಪುರುಷರ ವಾರ್ಡ್ಗಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ಹೊರ ರೋಗಿಗಳ ವಿಭಾಗಕ್ಕೆ ತೆರಳಿ ಅಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಶೌಚಾಲಯಗಳಿಗೆ ಹೋಗಿ ಸ್ವಚ್ಛತೆ ಇದೆಯೇ ಇಲ್ಲವೇ ಎನ್ನುವುದನ್ನು ನೋಡಿದರು.
ಆಸ್ಪತ್ರೆ ಹೊರಭಾಗದಲ್ಲಿ ಗಿಡ-ಕಂಟಿ ಬೆಳೆದಿರುವುದನ್ನು ನೋಡಿ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ್ ನಾಯಕ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಇದನ್ನು ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾನಾಡಿದ ಅವರು `ಆಸ್ಪತ್ರೆ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸ ಲಾಗುವುದು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಮಾತುಕತೆ ನಡೆಸಲಾಗುವುದು~ ಎಂದರು.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ಖಾಸಗಿ ಶಿಕ್ಷಣ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಿದ್ದು ಈ ಕುರಿತು ಚರ್ಚಿಸಲು ಇದೇ 21 ಸಭೆ ನಡೆಸಿ ನಡೆಸಲಾಗುವುದು ಎಂದು ಹೇಳಿದರು.
ಇಲ್ಲಿ ಮೆಡಿಕಲ್ ಕಾಲೇಜು ಆದರೆ ಆಸ್ಪತ್ರೆ ತಾನಾಗಿಯೇ ಅಭಿವೃದ್ಧಿ ಹೊಂದಲಿದೆ. ಈ ಬಾರಿ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಬಂದರೆ ಮೆಡಿಕಲ್ ಕಾಲೇಜು ಮಾಡುವ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.