ಚಿತ್ರದುರ್ಗ: ಆನ್ಲೈನ್ ಪರೀಕ್ಷೆ ಪದ್ಧತಿ ವಿರೋಧಿಸಿ ದೂರ ಶಿಕ್ಷಣ ಪದವಿ ಪ್ರವೇಶ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗುರುವಾರ ನಗರದ ಸಿಕ್ಕಿಂ ಮಣಿಪಾಲ್ ವಿಶ್ವವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ ಮುಖ್ಯಸ್ಥರ ವಿರುದ್ಧ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು ಆನ್ಲೈನ್ ಪರೀಕ್ಷಾ ಪದ್ಧತಿ ರದ್ದುಗೊಳಿಸಿ ಸಾಂಪ್ರದಾಯಕ ಪದ್ಧತಿ ಅಡಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಾಂಪ್ರದಾಯಿಕ ಪರೀಕ್ಷಾ ಪದ್ಧತಿ ಅನುಸಾರ ಎಂಬಿಎ, ಎಂಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಸಿಪಿಟಿ ಸೇರಿದಂತೆ ವಿವಿಧ ಪದವಿ ಕೋರ್ಸ್ಗಳಿಗೆ ಜಿಲ್ಲೆಯ ವಿವಿಧೆಡೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಆ ಪದ್ಧತಿಯಡಿ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದಾರೆ. ಆದರೆ, ವಿಶ್ವವಿದ್ಯಾಲಯ ಕೇಂದ್ರದವರು ಏಕಾಎಕಿ ಆನ್ಲೈನ್ ಪದ್ಧತಿಯಡಿ ಪರೀಕ್ಷೆ ಎದುರಿಸಬೇಕೆಂದು ತಿಳಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2011ರ ಡಿಸೆಂಬರ್ 9ರಂದು ಕೆಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಪರೀಕ್ಷಾ ಕೇಂದ್ರವನ್ನು ನಗರದಲ್ಲಿ ನಡೆಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದುಆರೋಪಿಸಿದರು.
ಆದ್ದರಿಂದ, ಹಳೆ ಪದ್ಧತಿಯಡಿ ದಾವಣಗೆರೆಯಲ್ಲಿ ಪರೀಕ್ಷೆ ಬರೆಯಲು ಮಾನಸಿಕವಾಗಿ ವಿದ್ಯಾರ್ಥಿಗಳು ಸಿದ್ಧರಾಗಿದ್ದರು. ಆದರೆ, ಗುರುವಾರ ತುರ್ತು ಸಭೆ ಕರೆದು ಹೇಳಿದರೆಆನ್ಲೈನ್ ಪದ್ಧತಿಯಲ್ಲಿ ಪರೀಕ್ಷೆ ಬರೆಯಲು ಹೇಗೆ ಸಾಧ್ಯ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಪರೀಕ್ಷೆಗೆ ಇನ್ನು 15 ದಿನ ಬಾಕಿಯಿದೆ. ವಿದ್ಯಾರ್ಥಿಗಳು ತಾಂತ್ರಿಕವಾಗಿ, ಮಾನಸಿಕವಾಗಿ ಕಂಪ್ಯೂಟರ್ ಶಿಕ್ಷಣದ ಕೊರತೆ ಎದುರಿಸುತ್ತಿದ್ದಾರೆ. ತಕ್ಷಣ ಹೊಸ ಪದ್ಧತಿಗೆ ಹೊಂದಿಕೊಳ್ಳಲು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿ ಅಳವಡಿಸುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿ. ಸ್ವರಬ್, ಲಾಲನ್ ಕುಮಾರ್, ಎಂ.ಎಸ್. ಪವನ್, ಎಸ್.ಕೆ. ಗೀತಾ, ಪಿ. ಕವಿತಾ, ಎಸ್. ಲಕ್ಷ್ಮೀ, ಕೆ.ಎನ್. ವಿಶ್ವನಾಥ್, ಶಿವರಾಜ್, ಎಸ್. ನಾಗದತ್ತ, ಸುಮಿರಾಬಾನು, ವಿ.ಎಚ್. ದಯಾನಂದ್, ಇ. ರೇಣುಕಾ, ಎಸ್.ಎನ್. ರಾಜಶೇಖರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.