ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಒಕ್ಕೊರಲ ಮನವಿ:ಲೈಂಗಿಕ ಕಾರ್ಯಕರ್ತೆಯರ ಶೋಷಣೆ ತಪ್ಪಿಸಿ

Last Updated 19 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಕೋಲಾರ: ಗೂಂಡಾಗಳು, ನಿಕಟ ಸಂಗಾತಿಗಳು, ನೆರೆಹೊರೆಯವರು, ದಲ್ಲಾಳಿಗಳು, ಕುಟುಂಬದವರಿಂದ ಶೋಷಣೆಗೆ ಒಳಗಾಗುವ ಲೈಂಗಿಕ ವೃತ್ತಿಪರ ಮಹಿಳೆಯರಿಗೆ ಸಮುದಾಯವು ನೆರವಿನ ಹಸ್ತ ಚಾಚಬೇಕಾಗಿದೆ..

-ಸೌಖ್ಯ ಸಮೃದ್ಧಿ ಸಂಸ್ಥೆ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ (ಕೆಎಚ್‌ಪಿಟಿ) ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ವತಿಯಿಂದ `ಸಂವೇದನ~ ಯೋಜನೆ ಅಡಿ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಶೋಷಿತ ಮಹಿಳೆಯರು ಕೋರಿದ ರೀತಿ ಇದು.

ಲೈಂಗಿಕ ವೃತ್ತಿನಿರತ ಮಹಿಳೆಯರ ವಿರುದ್ಧ ದೌರ್ಜನ್ಯವನ್ನು ತಡೆಯುವ ಸಲುವಾಗಿಯೇ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಅದು. ಸುಮಾರು 300 ಕ್ಕೂ ಹೆಚ್ಚು ಮಹಿಳೆಯರು ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ಗ್ರಾಮಗಳಿಂದ ಸೇರಿದ್ದರು. ತಮಗೆ ಆಗುತ್ತಿರುವ ದೌರ್ಜನ್ಯವನ್ನು ಅವರು ಖಂಡಿಸಿದರು. ದೌರ್ಜನ್ಯಗಳಿಂದ ಹೊರಬರಲು ಮತ್ತು ಗೌರವಯುತ ಜೀವನ ನಡೆಸಲು ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಿ. ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.   

ಸೌಖ್ಯ ಸಮೃದ್ಧಿ ಸಂಸ್ಥೆಯ ಸದಸ್ಯೆ ಮಾಧವಿ (ಹೆಸರು ಬದಲಿಸಲಾಗಿದೆ) ಲೈಂಗಿಕ ಕಾರ್ಯಕರ್ತೆಯರು ಎದುರಿಸುವ ಅನೇಕ ರೀತಿಯ ಶೋಷಣೆ ಮತ್ತು ದೌರ್ಜನ್ಯಗಳ ಕುರಿತು  ಪ್ರೇಕ್ಷಕರ ಮನಮುಟ್ಟುವಂತೆ ವಿವರಿಸಿದರು. ಮುಖ್ಯವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವುದರಿಂದ ಲೈಂಗಿಕ ಕಾರ್ಯಕರ್ತೆಯರ ಗುರುತು ಅಕ್ಕಪಕ್ಕದವರಿಗೆ ಸುಲಭವಾಗಿ ತಿಳಿಯುತ್ತದೆ.

ಪದೇ ಅದೇ ಕಾರಣದಿಂದ ಪದೇ ಮನೆಗಳನ್ನು ಬದಲಿಸಬೇಕಾಗುತ್ತದೆ. ಮೂಲಸೌಲಭ್ಯಗಳಾದ ವಸತಿ, ಮನೆ, ಅಂತ್ಯೋದಯ ರೇಶನ್ ಕಾರ್ಡ್ ಪಡೆಯುವುದು ಕಷ್ಟ. ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗದಂತೆ ಜೀವನ ನಿರ್ವಹಿಸುವುದೂ ಕಷ್ಟ ಎಂದು ನುಡಿದರು.

ಸಮಾವೇಶ ಉದ್ಘಾಟಿಸಿದ ಡಾ.ಡಿ.ಎಸ್.ವಿಶ್ವನಾಥ್, ಲೈಂಗಿಕ ವೃತ್ತಿಪರ ಮಹಿಳೆಯರಿಗೆ ಸರ್ಕಾರದಿಂದ ಸೌಲಭ್ಯ ತಲುಪುವಂತೆ ಮಾಡಲು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯಅಭಿಯಾನದ ಕಾರ್ಯಕ್ರಮ ಅಧಿಕಾರಿ ಡಾ.ಸ್ವತಂತ್ರ ಕುಮಾರ್ ಬಣಕಾರ್, ಕಾರ್ಯಕ್ರಮದಡಿ ಮಹಿಳೆಯರಿಗೆ ಜನನಿ ಸುರಕ್ಷಿತಾ ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಹೆರಿಗೆಯ ಎಲ್ಲ ಖರ್ಚುವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ ಎಂದು ವಿವರಿಸಿದರು.

ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್‌ನ ಪ್ರಾದೇಶಿಕ ವ್ಯವಸ್ಥಾಪಕ ಪರಮೇಶ್ವರ ಹೊಳ್ಳಾ, ಸಂವೇದನ ಯೋಜನೆ ಉದ್ದೇಶಗಳನ್ನು ವಿವರಿಸಿದರು.  ಕೆಎಚ್‌ಪಿಟಿ ಯೋಜನಾ ನಿರ್ದೇಶಕ ಡಾ. ಶ್ರೀನಾಥ್ ಮದ್ದೂರು ಉಪಸ್ಥಿತರಿದ್ದರು.  ಉತ್ತಮ ಕಾರ್ಯನಿರ್ವಹಿಸಿದ ಐಸಿಟಿಸಿ ಆಪ್ತಸಮಾಲೋಚಕರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಮೆರವಣಿಗೆ: ಸಮಾವೇಶಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೌನ ಮೆರವಣಿಗೆಯನ್ನು ಮೈರಾಡ ಸಂಸ್ಥೆಯ ಡಾ.ಮಾಯಾ ಮಾಸ್ಕಿನರ್ ಉದ್ಘಾಟಿಸಿದರು.  ಮೆರವಣಿಗೆ ಕೊನೆಗೊಂಡ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ  ಆರ್.ಎಸ್.ಪೆದ್ದಪ್ಪಯ್ಯ ಅವರಿಗೆ ಕಾರ್ಯಕರ್ತರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT