ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ರಂಗಮಂದಿರ ಕನಸು ನನಸಾಗಲಿ

Last Updated 16 ಜುಲೈ 2012, 4:40 IST
ಅಕ್ಷರ ಗಾತ್ರ

ದಾವಣಗೆರೆ: ಇಂದಿನ ನಾಟಕಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಕಲಾವಿದರ ಕೊರತೆ ಕಾಡುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ವಿಷಾದಿಸಿದರು.

ನಗರದಲ್ಲಿ ಭಾನುವಾರ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ನಾಟಕಗಳಲ್ಲಿ ಕಲಾವಿದರ ಪಾತ್ರಗಳೊಂದಿಗೆ ಪ್ರೇಕ್ಷಕರು ತಾದಾತ್ಮ್ಯ ಹೊಂದುತ್ತಿದ್ದರು. ಅಂದಿನ ಕಲಾವಿದರಿಗೆ ತಮ್ಮ ಅಭಿನಯ ಶಕ್ತಿಯಿಂದ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ, ಪ್ರತಿಭೆ ಇರುತ್ತಿತ್ತು. ಆದರೆ, ಇಂದಿನ ನಾಟಕಗಳಲ್ಲಿ ಅಂತಹ ಕಲಾವಿದರ ಕೊರತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ರಂಗಮಂದಿರ ನಿರ್ಮಾಣ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಕಲಾವಿದರು ಸರ್ಕಾರದ ಸೌಲಭ್ಯ  ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಸರ್ಕಾರ ನಡೆಸುವವರಿಗೆ ಸಾಂಸ್ಕೃತಿಕ ಮನಸ್ಸು ಇದ್ದಲ್ಲಿ ಕಲೆ, ಸಂಸ್ಕೃತಿಯ ಅಭಿವೃದ್ಧಿ ಸಾಧ್ಯ. ಅಕಾಡೆಮಿಯ ನೂತನ ಸಹ ಸದಸ್ಯ ಎ. ಭದ್ರಪ್ಪ ಅವರ ಅವಧಿಯಲ್ಲಿ ಜಿಲ್ಲಾ ಮಂದಿರದ ಕನಸು ಸಾಕಾರಗೊಳ್ಳಲಿ ಎಂದು ಆಶಿಸಿದರು.

ನಗರಸಭೆಯ ಮಾಜಿ ಸದಸ್ಯ ಎಸ್. ಮಲ್ಲಿಕಾರ್ಜುನ, ಕೆಬಿಆರ್ ಡ್ರಾಮಾ ಕಂಪೆನಿ ಮಾಲೀಕ ಚಿಂದೋಡಿ ಚಂದ್ರಧರ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿಗಳಾದ `ಅಭಿಯಂತರಂಗ~ದ ಎಸ್. ಚಿದಾನಂದ, ಪೇಂಟರ್ ಆದಿಶೇಷ ಮತ್ತು ತಿಪ್ಪೇಸ್ವಾಮಿ ಚವಾಣ್, ಕಂಚಿಕೇರಿ ಶಿವಣ್ಣ ಅವರನ್ನು  ಸನ್ಮಾನಿಸಲಾಯಿತು. ಜಿ. ನಾಗವೇಣಿ ಪ್ರಾರ್ಥಿಸಿದರು. ಅಕಾಡೆಮಿ ಸಹ ಸದಸ್ಯ ಎ. ಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಜಯಲಕ್ಷ್ಮೀ ನಾಟ್ಯ ಸಂಘದ ಕಲಾವಿದರು ಬಿ. ಓಬಳೇಶ ರಚಿತ `ಮುಂಡೇಮಗ~ ನಾಟಕ ಪ್ರದರ್ಶಿಸಿದರು.

`ಬಂಟ ಸಮುದಾಯಕ್ಕೆ ಅವಮಾನ~
ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಇಡೀ ಬಂಟ ಸಮುದಾಯಕ್ಕೆ ನೋವು ಉಂಟಾಗಿದೆ ಎಂದು ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀನಿವಾಸ ಶೆಟ್ಟಿ ಸಜ್ಜನ ರಾಜಕಾರಣಿ ಆಗಿದ್ದು, ಬಣ- ರೆಸಾರ್ಟ್ ರಾಜಕಾರಣ ಮಾಡದ ವರು. ಸತತವಾಗಿ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳ ಬೇಕಿತ್ತು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜುಲೈ 12ರಂದು ನಡೆದ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಹಾಲಾಡಿ ಅವರಿಗೆ ಸೂಚನೆ ನೀಡಿದ್ದರೂ, ಕೊನೆ ಕ್ಷಣದಲ್ಲಿ ಅವರ ಹೆಸರನ್ನು ಕೈ ಬಿಟ್ಟಿರುವುದು ಇಡೀ ಬಂಟ ಸಮಾಜದವರ ಭಾವನೆಗೆ ನೋವುಂಟಾಗಿದೆ ಎಂದು ವಿಷಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಎಂ. ಪ್ರಭಾಕರ ಶೆಟ್ಟಿ, ಖಜಾಂಚಿ ಯು. ಭುಜಂಗಶೆಟ್ಟಿ, ರಾಜಶೇಖರ ಶೆಟ್ಟಿ, ಕುಶಲ್ ಶೆಟ್ಟಿ, ಉಮೇಶ್ ಶೆಟ್ಟಿ, ಜಯರಾಂ ಹೆಗಡೆ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT