ಬಾಗಲಕೋಟೆ: ವಿವಿಧ ದೂರವಾಣಿ ಕಂಪೆನಿಗಳ ಪೈಪೋಟಿಗಳ ನಡುವೆಯೂ ಭಾರತ ಸಂಚಾರ ನಿಗಮ (ಬಿಎಸ್ಎನ್ಎಲ್) ವಿಶಿಷ್ಟ ಸೇವೆಗೆ ಮುಂದಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ದೂರವಾಣಿ ಗೋಪುರಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ವಿಜಾಪುರದ ನಗರದಲ್ಲಿ ನಡೆದ ದೂರವಾಣಿ ಸಲಹಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಂಪರ್ಕ ಜಾಲ ಅತ್ಯವಶ್ಯಕವಾಗಿದ್ದು, ಜನರ ಅವಶ್ಯಕತೆಗಳಗುಣವಾಗಿ ಬಿ.ಎಸ್.ಎನ್.ಎಲ್. ವಿವಿಧ ಮಾದರಿಯ ದೂರವಾಣಿ ಸಂಪರ್ಕ ಕಲ್ಪಿಸಿದ್ದು, ಜನರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಒಂದು ಗೋಪುರ ನಿರ್ಮಾಣವಾಗಲು ಒಂದು ಕೋಟಿ ರೂ. ಖರ್ಚಾಗುತ್ತಿದ್ದು, ಈ ಭಾರ ಗ್ರಾಹಕರ ಮೇಲೆ ಆಗದಂತೆ ಯೋಗ್ಯ ದರದಲ್ಲಿ ದೂರವಾಣಿ ಸಂಪರ್ಕ ಒದಗಿಸುವತ್ತ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ದೂರವಾಣಿಯ ವಿವಿಧ ಯೋಜನೆಗಳು ಹಾಗೂ ಬ್ರಾಡ್ಬ್ಯಾಂಡ್ ಬಗ್ಗೆ ವಿವರಣೆ ನೀಡಿದ ಬಿಎಸ್ಎನ್ಎಲ್ ವಿಜಾಪುರ ವಿಭಾಗದ ಉಪ ಪ್ರಬಂಧಕ ವಿ.ಕೆ.ಮಾವೂಲಿ, ಬಿಎಸ್ಎನ್ಎಲ್ ಕರ್ನಾಟಕ ವಲಯದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದು, ನಮಗೆ ನೀಡಿದ ಗುರಿ ಮುಟ್ಟುವಲ್ಲಿ ತಾವು ಸಾಧನೆಗೈಯುತ್ತಿದ್ದು, ಜನರ ಅವಶ್ಯಕತೆಗನುಗುಣವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ, ವ್ಯವಸ್ಥಾಪಕ ನಿರ್ದೇಶಕ ಕೆ.ಮಧೂಸುದನ ರಾವ್, ಎಂ.ಎನ್. ಬೆಳಗಲ್, ಹಾಗೂ ಸಲಹಾ ಸಮಿತಿ ಸದಸ್ಯರಾದ ರುದ್ರಪ್ಪ ಅಡವಿ, ಬಸಪ್ಪ ಆಲೂರ, ರಾಮನಗೌಡ ಪಾಟೀಲ, ಶಂಕರಲಿಂಗ ದೇಸಾಯಿ, ಸಂಗಪ್ಪ ಶೆಟ್ಟರ, ಶಿವಪುತ್ರಪ್ಪ ಕಲಬಂದಾರಿ ಉಪಸ್ಥಿತರಿದ್ದರು.