ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸಲು ಚುನಾವಣಾ ತಯಾರಿ ನಡೆಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಲ್ಲಿ ಸೋಮ ವಾರ ನಡೆದ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ. ಐದಕ್ಕೆ ಐದು ಕ್ಷೇತ್ರಗಳಲ್ಲಿ ಈ ಬಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಪ್ರಾಬಲ್ಯ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ಅಧಿಕಾರ ಅನುಭವಿಸಿ ಕೆಲವರು ತಾವು ಏರಿದ ಏಣಿಯನ್ನೇ ಒದ್ದಿದ್ದಾರೆ ಎಂದು ತರೀಕೆರೆ ಶಾಸಕರ ಹೆಸರು ಪ್ರಾಸ್ತಾಪಿಸದೆ ಟೀಕಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಚಿತ್ರದುರ್ಗ ಮಠದ ಸ್ವಾಮೀಜಿಗಳು ನೈತಿಕವಾಗಿ ಚುನಾವಣೆ ಎದುರಿಸುವಂತೆ ನೀಡಿರುವ ಸಲಹೆಗಳನ್ನು ಪಕ್ಷ ಸ್ವಾಗತಿಸಿದೆ. ಪ್ರಾದೇಶಿಕ ಹಿತಕ್ಕೆ ಮತದಾರರು ಮರುಳಾಗದೆ ರಾಷ್ಟ್ರೀಯ ಹಿತಕ್ಕೆ ಗಮನ ಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್.ಪ್ರೇಂಕುಮಾರ್ ಮಾತನಾಡಿ, ಪಕ್ಷದ ಅಭಿವೃದ್ಧಿ ಕಾರ್ಯ ವಿವರಿಸಿದರು. ಈ ಚುನಾವಣೆ ಅಪಪ್ರಚಾರ ಮತ್ತು ಅಭಿವೃದ್ಧಿ ನಡುವೆ ನಡೆಯಲಿದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿದರು.
ರಾಜ್ಯ ಕಾರ್ಯಕಾರಿಣಿ ಎಂ.ಎಸ್.ಬೋಜೇಗೌಡ ಹಾಜರಿದ್ದರು.