ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸಡಗರದ ಗಣರಾಜ್ಯೋತ್ಸವ

Last Updated 27 ಜನವರಿ 2012, 11:00 IST
ಅಕ್ಷರ ಗಾತ್ರ

ತಿಪಟೂರು: ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ಯುವಜನಾಂಗ ಬದ್ಧತೆ ತೋರಿದರೆ ಸದೃಢ, ಸಮೃದ್ಧ ಹಾಗೂ ಸಾಮರಸ್ಯದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಉಪ ವಿಭಾಗಾಧಿಕಾರಿ ಎಂ.ಶಿಲ್ಪಾ ತಿಳಿಸಿದರು.
 
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ,  ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ, ಅಸಮಾನತೆ ದೇಶದ ಭವಿಷ್ಯಕ್ಕೆ ಮಾರಕವಾಗಿದೆ ಎಂದರು
.
ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಸ್ವಜನ ಪಕ್ಷಪಾತ ದೇಶದ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತಂದಿದ್ದು, ಎಲ್ಲರೂ ಒಗ್ಗಟ್ಟಿನ ಹಾದಿಯಲ್ಲಿ ನಡೆಯಬೇಕು ಎಂದರು.

ತಾ.ಪಂ. ಅಧ್ಯಕ್ಷೆ ವಸಂತಗಂಗಾಧರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸ್ಟೆಲ್ಲಾ ಮೇರೀಸ್ ಪ್ರಥಮ, ಸರ್ಕಾರಿ ಪ್ರಧಾನ ಶಾಲೆ ದ್ವಿತೀಯ ಹಾಗೂ ಡಫೋಡಿಲ್ಸ್ ಮತ್ತು ಪದ್ಮಾ ಶಾಲೆ ತೃತೀಯ ಸ್ಥಾನ ಪಡೆದವು. ಪ್ರೌಢಶಾಲಾ ವಿಭಾಗದಲ್ಲಿ ಎಸ್‌ವಿಪಿ ಪ್ರಥಮ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ದ್ವಿತೀಯ ಹಾಗೂ ಸುಮತಿ ಪ್ರೌಢಶಾಲೆ ತೃತಿಯ ಸ್ಥಾನ ಪಡೆದವು. ವೇಷಭೂಷಣದಲ್ಲಿ ಭೋವಿ ಕಾಲೋನಿ ಸರ್ಕಾರಿ ಪ್ರಾ. ಶಾಲೆಯ ಭಾರತ ಮಾತೆ ಪಾತ್ರಧಾರಿ ಪ್ರಥಮ, ಸರ್ಕಾರಿ ಉರ್ದು ಶಾಲೆ ಡಾ.ಮೌಲನಾ ಅಬ್ದುಲ್ ಕಲಾಂ ದ್ವಿತೀಯ ಹಾಗೂ ಆಲ್‌ಅಮಿನ್ ಶಾಲೆಯ ಗಾಂಧಿ ಪಾತ್ರಧಾರಿ ತೃತೀಯ ಬಹುಮಾನ ಪಡೆದರು.

`ಕೃಷಿ ಕ್ಷೇತ್ರ ಸದೃಢ ಅಗತ್ಯ~
ಶಿರಾ: ದೇಶದ ಕೃಷಿ ಕ್ಷೇತ್ರವನ್ನು ಹೆಚ್ಚು ಸದೃಢಗೊಳಿಸಬೇಕಾದ ಅಗತ್ಯವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ 63ನೇ ಗಣರಾಜ್ಯೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಕೃಷಿ ಕ್ಷೇತ್ರ ಲಾಭದಾಯಕ ಕಸುಬಾಗಿ ಉಳಿದಿಲ್ಲ. ಆದರೆ ಹಾಗೆಂದು ಕೃಷಿ ಕ್ಷೇತ್ರ ನಿರ್ಲಕ್ಷಿಸುವಂತೆ ಇಲ್ಲ. ಕೃಷಿ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಬೇಕಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಗಳಿಸಿದ ಸಂದರ್ಭ ಭಾರತ ಜಗತ್ತಿನಲ್ಲೇ ಬಡ ದೇಶವಾಗಿತ್ತು. ಸ್ವಾತಂತ್ರ್ಯ ನಂತರ ದೇಶವನ್ನು ಸಮರ್ಥವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಕಟ್ಟುವ ಕೆಲಸವನ್ನು ಹಲವರು ಮಾಡಿದ್ದಾರೆ. 2020ರ ಹೊತ್ತಿಗೆ ಭಾರತ ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದರು.

ತಹಶೀಲ್ದಾರ್ ಜಿ.ಎಚ್.ನಾಗಹನುಮಯ್ಯ ಧ್ವಜಾರೋ ಹಣ ನೆರವೇರಿಸಿದರು. ಪೊಲೀಸರು ಸೇರಿದಂತೆ ವಿವಿಧ ಶಾಲೆ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ದೇಶದ ಅಭಿಮಾನ ಸಾರುವ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಸತ್ಯಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್, ಸಿ.ಆರ್.ಉಮೇಶ್, ನಗರಸಭೆ ಉಪಾಧ್ಯಕ್ಷ ಅಮಾನುಲ್ಲಾಖಾನ್, ಸದಸ್ಯರಾದ ಆರ್.ರಾಮು, ಸರೋಜಮ್ಮ, ಎಪಿಎಂಸಿ ಅಧ್ಯಕ್ಷ ಶಶಿಧರ್‌ಗೌಡ, ನಗರಸಭೆ ಪೌರಾಯುಕ್ತ ಬಿ.ಟಿ.ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಟಿ.ತಮ್ಮಣ್ಣ, ಬಿಇಒ ಮಾಧವರೆಡ್ಡಿ, ಟಿಎಚ್‌ಒ ಡಾ.ತಿಮ್ಮರಾಜು ಮತ್ತಿತರರು ಇದ್ದರು.

ಮಾದರಿ ರಾಷ್ಟ್ರವನ್ನಾಗಿ ನಿರ್ಮಿಸಿ: ಸಲಹೆ
ತುರುವೇಕೆರೆ:
ಸಾಂವಿಧಾನಿಕ ಹಕ್ಕುಗಳ ಖಾತರಿ ಹಾಗೂ ಜವಾಬ್ಧಾರಿಗಳ ಸಮರ್ಥ ನಿರ್ವಹಣೆ ಮೂಲಕ ದೇಶವನ್ನು ಜಾಗತಿಕ ಮಟ್ಟದಲ್ಲಿ ಮಾದರಿ ರಾಷ್ಟ್ರವನ್ನಾಗಿ ಪುನರ್‌ಪೂಪಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಲಹೆ ನೀಡಿದರು.

ಗುರುವಾರ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತನ್ನು ನಿಗ್ರಹಿಸುವ ಮೂಲಕ ಗ್ರಾಮೀಣ ಜೀವನಮಟ್ಟವನ್ನು ಸುಧಾರಿಸಬೇಕು ಎಂದರು.

ತಹಸೀಲ್ದಾರ್ ಟಿ.ಆರ್.ಶೋಭಾ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಪ್ರಕಾಶಕ ಕೇಶವಮೂರ್ತಿ ಹಾಗೂ ಬ್ಯಾಲಹಳ್ಳಿ ಗೊಲ್ಲರಹಟ್ಟಿ ಪ್ರಗತಿಪರ ಕೃಷಿಕ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ. ಸದಸ್ಯರಾದ ಎ.ಬಿ.ಜಗದೀಶ್, ಮಂಗಳಗೌರಮ್ಮ, ಲತಾ ವಿಶ್ವನಾಥ್, ತಾ.ಪಂ. ಅಧ್ಯಕ್ಷೆ  ಪದ್ಮಾವತಿ, ಪ.ಪಂ. ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಎಪಿಎಂಸಿ ಉಪಾಧ್ಯಕ್ಷ ಆಂಜನಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ್, ಇಒ ಪ್ರಕಾಶ್, ಸಿಪಿಐ ತಿರುಮಲಯ್ಯ, ಪಿಎಸ್‌ಐ ಅಜರುದ್ದೀನ್, ಮುಖ್ಯಾಧಿಕಾರಿ ಎಂ.ಕುಮಾರ್, ಪದ್ಮನಾಭ್ ಉಪಸ್ಥಿತರಿದ್ದರು. ಆನಂದರಾಜ್ ಸ್ವಾಗತಿಸಿದರು. ಎಂ.ಕೆ.ನಾಗರಾಜ್ ನಿರೂಪಿಸಿದರು. ವಿದ್ಯಾರ್ಥಿಗಳು ಆಕರ್ಷಕ ಡಂಬಲ್ಸ್, ಏರೋಬಿಕ್ಸ್, ಯೋಗಾಸನ ಹಾಗೂ ಇತರೆ ಕವಾಯಿತು  ಪ್ರದರ್ಶಿಸಿದರು. ಎಸ್.ಕೆ.ಥಾಮಸ್ ನಿರ್ದೇಶಿಸಿದರು.

ದೇಶದಲ್ಲಿ ಬಲಿಷ್ಠ ಸಂವಿಧಾನ
ಚಿಕ್ಕನಾಯಕನಹಳ್ಳಿ: ಗಣತಂತ್ರ ವ್ಯವಸ್ಥೆಯಡಿ ರೂಪಿತವಾದ ದೇಶದ ಸಂವಿಧಾನ ಅತ್ಯಂತ ಬಲಿಷ್ಠವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಡಾ. ಅಂಬೇಡ್ಕರ್ ಜಾತ್ಯತೀತತೆ ಹಾಗೂ ಸಹಬಾಳ್ವೆಯ ಪರಿಕಲ್ಪನೆ ರೂಪಿಸಿದ್ದಾರೆ ಎಂದರು.

ತಹಸೀಲ್ದಾರ್ ಆರ್.ಉಮೇಶ್‌ಚಂದ್ರ ಧ್ವಜಾರೋಹಣ ನೆರವೇರಿಸಿದರು. ವಕೀಲರಾದ ಸಿ.ಕೆ.ಸೀತಾರಾಮಯ್ಯ ಮತ್ತು ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಬಿಇಒ ಸಾ.ಚಿ.ನಾಗೇಶ್, ಇಒ ದಯಾನಂದ್, ರೇಣುಕಮೂರ್ತಿ ಉಪಸ್ಥಿತರಿದ್ದರು.

ರಾಜ್ಯದ ಅಭಿವೃದ್ಧಿ ಕುಂಠಿತ: ಅನಿತಾ
ಮಧುಗಿರಿ: ರಾಜಕೀಯದ ಅಸ್ಥಿರತೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಏರ್ಪಡಿಸಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರಿಗೆ ಸರ್ಕಾರ ಸೂಕ್ತ ಸವಲತ್ತು ನೀಡದ ಕಾರಣ ಆಹಾರ ಉತ್ಪಾದನೆ ಕುಂಠಿತಗೊಂಡಿದೆ. ಸರ್ಕಾರದ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ ಎಂದರು.

ಉಪವಿಭಾಗಧಿಕಾರಿ ದೀಪ್ತಿ ದೀಲಿಪ್ ಮೆಹೆಂದಳೆ, ಜಿ.ಪಂ. ಸದಸ್ಯರಾದ ಎಚ್.ಕೆಂಚಮಾರಯ್ಯ, ಶಾಂತಲಾರಾಜಣ್ಣ, ಮಂಜುಳಾ ವೀರೇಂದ್ರಪ್ರಸಾದ್, ಸುಮನಾ ಚಂದ್ರಶೇಖರ್, ಯಶೋಧಶ್ರಿನಿವಾಸ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಬಿ.ಜಯದೇವ್, ಪುರಸಭಾ ಉಪಾಧ್ಯಕ್ಷೆ ಲಲಿತಾ ಕುಮಾರಿ, ಡಿಡಿಪಿಐ ಅಂಜಿನಪ್ಪ, ಎಎಸ್‌ಪಿ ವಂಶಿಕೃಷ್ಣ, ಸಿಪಿಐ ಸತ್ಯನಾರಾಯಣ ಎನ್ ಕುದೂರ್, ತಹಶೀಲ್ದಾರ್ ಆರ್. ನಾಗರಾಜಶೆಟ್ಟಿ, ಬಿಇಒ ವೈ.ಎನ್.ರಾಮಕೃಷ್ಣಯ್ಯ, ಪುರಸಭಾ ಸದಸ್ಯರಾದ ಎನ್.ಗಂಗಣ್ಣ, ಎಂ.ವಿ.ಗೋವಿಂದರಾಜು, ಎಂ.ಎಲ್. ಗಂಗಾರಾಜು, ರತ್ನಮ್ಮ ಖಲೀಲ್ ಉರ್ ರೆಹಮಾನ್, ಕಸಾಪ ತಾಲ್ಲೂಕು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ತಿಪ್ಪೇಸ್ವಾಮಿ ಇತರರು ಹಾಜರಿದ್ದರು.

ಪ್ರಜಾಪ್ರಭುತ್ವಕ್ಕೆ ಸಂವಿಧಾನ ಸಹಕಾರಿ
ಗುಬ್ಬಿ: ರಾಷ್ಟೀಯ ಹಬ್ಬಗಳು ಆಚರಣೆಗಳಾಗಿವೆಯೇ ಹೊರತು ಪ್ರಾಮುಖ್ಯತೆ ಪಡೆಯುತ್ತಿಲ್ಲ ಎಂದು ತಹಶೀಲ್ದಾರ್ ಎಚ್.ಜ್ಞಾನೇಶ್ ಹೇಳಿದರು.

ಪಟ್ಟಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆ ರೂಪಿಸುವಲ್ಲಿ ಸಂವಿಧಾನ ಸಹಕಾರಿಯಾಗಿದೆ ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೋಹನ್‌ಕುಮಾರಿ ಮಾತನಾಡಿದರು. ವಿದ್ಯಾರ್ಥಿಗಳೇ ಪ್ರಧಾನ ಭಾಷಣ ಮಾಡಿದರು.

ಶಾಸಕ ಎಸ್.ಆರ್.ಶ್ರಿನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಿ.ರೂಪ, ತಾ.ಪಂ. ಅಧ್ಯಕ್ಷ ಶಿವಣ್ಣ, ಜಿ.ಪಂ. ಸದಸ್ಯರಾದ ಟಿ.ಆರ್.ಗೌರಮ್ಮ, ಪಿ.ಬಿ.ಚಂದ್ರಶೇಖರಬಾಬು, ಪ್ರಾಂಶುಪಾಲ ಕೆ.ಎಸ್.ಸಿದ್ಧಲಿಂಗಪ್ಪ, ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಹಾಜರಿದ್ದರು. ಶಂಕರಕುಮಾರ್ ಸ್ವಾಗತಿಸಿ, ಆರ್.ಬಿ.ಜಯಣ್ಣ ವಂದಿಸಿ, ಸೋಮಶೇಖರ್ ನಿರೂಪಿಸಿದರು.

ಭ್ರಷ್ಟಾಚಾರದ ಕಾರ್ಮೋಡ
ಕುಣಿಗಲ್:
ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಭ್ರಷ್ಟಾಚಾರದ ಕರಿಮೋಡ ಮುಸುಕಿದ್ದು, ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕಂಕಣಬದ್ಧರಾಗ ಬೇಕೆಂದು ಶಾಸಕ ಬಿ.ಬಿ. ರಾಮಸ್ವಾಮಿಗೌಡ ಹೇಳಿದರು.

ಪಟ್ಟಣದ ಮಹಾತ್ಮಗಾಂಧಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ 63ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸ್ವತಂತ್ರ ಸಂಗ್ರಾಮದ ಏಕಮಾತ್ರ ಗುರಿ ಪೂರ್ಣ ಸ್ವರಾಜ್ಯವಾಗಿತ್ತು. ತನ್ಮೂಲಕ ದೇಶದಲ್ಲಿ ಸರ್ವರಿಗೂ ಸಮಾನ ಹಕ್ಕು ಇದೆ ಎಂದರು.

ತಹಶೀಲ್ದಾರ್ ಎಸ್‌ಆರ್.ಕೃಷ್ಣಯ್ಯ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರಾಮಣ್ಣ, ಉಪಾಧ್ಯಕ್ಷೆ ಜಮುನಾ, ಪುರಸಭೆ ಅಧ್ಯಕ್ಷೆ ಆಯಿಷಾಬೀ ಇತರರು ಉಪಸ್ಥಿತದ್ದರು. ಹರಿಕಥಾ ವಿದ್ವಾನ್ ಅಂಗವಿಕಲೆ ಆಲ್ಕೆರೆ ಗ್ರಾಮದ ಜಯಶ್ರೀ,  ಕ್ರಿಕೆಟ್ ಕೋಚರ್ ರಂಗನಾಥ್, ಗರಡಿ ಮನೆ ಮುಖ್ಯಸ್ಥರಾದ ಪೈಲ್ವಾನ್ ಶ್ರೀಕಂಠಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಎಲ್.ಕೆ.ಪುಟ್ಟಶಾಮಯ್ಯ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಲೊಕೇಶ್ ವಂದಿಸಿದರು.

`ಸಶಕ್ತ ದೇಶ ನಿರ್ಮಾಣವು ಕರ್ತವ್ಯ~
ಕೊರಟಗೆರೆ:
ಬಡತನ, ಭ್ರಷ್ಟಾಚಾರ, ಭಯೋತ್ಪಾದನೆಗಳಿಂದ ಮುಕ್ತವಾದ ಸಶಕ್ತ, ಸದೃಢ ಭಾರತ ಕಟ್ಟುವ ಹಾಗೂ ಸ್ವಾತಂತ್ರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್ ವಿ.ಪಾತರಾಜು ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು. ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ತಾಲ್ಲೂಕು ಆಡಳಿತದ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಆರ್.ಸುಧಾಕರ್ ಲಾಲ್, ಟಿ.ಡಿ.ಪ್ರಸನ್ನಕುಮಾರ್, ದಾಕ್ಷಾಯಿಣಿ ರಾಜಣ್ಣ, ಪ್ರೇಮ ಮಹಾಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ. ಬಲರಾಮಯ್ಯ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ನೌಕರರ ಸಂಘದ ಅಧ್ಯಕ್ಷ ವಿ.ಕೆ. ವೀರಕ್ಯಾತರಾಯ, ಬಿಇಒ ಐ.ಎಸ್.ಮಹೇಶ್, ಪ.ಪಂ. ಮುಖ್ಯಾಧಿಕಾರಿ ಶ್ರೀನಿವಾಸ್,  ಇನ್ಸ್‌ಪೆಕ್ಟರ್ ಕೆ.ಆರ್.ಚಂದ್ರಶೇಖರ್, ಅಕ್ಷರ ದಾಸೋಹ ಅಧಿಕಾರಿ ಎಲ್.ಕಾಮಯ್ಯ, ಎಇಇ ಸಿದ್ದಗಂಗಯ್ಯ, ವಾಸುದೇವನ್, ಪ್ರಾಂಶುಪಾಲ ಮೀರ್‌ಅಲೀಂ ಹುಸೇನ್, ಪುಷ್ಪವಲ್ಲಿ, ಕೃಷ್ಣಪ್ಪರೆಡ್ಡಿ, ಗುರುಪ್ರಕಾಶ್, ಬೈರಪ್ಪ, ಗುರುಪ್ರಸಾದ್, ಎಡಿಎಂ ಮೂರ್ತಿ, ಎ.ಜಿ.ರಾಜು ಇತರರು ಉಪಸ್ಥಿತರಿದ್ದರು.

ಪ್ರಾಮಾಣಿಕರನ್ನು ಚುನಾಯಿಸಲು ಸಲಹೆ
ಪಾವಗಡ:
ದೇಶದ ಪ್ರಜಾತಂತ್ರ ವ್ಯವಸ್ಥೆ ಭದ್ರತೆಗಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಚುನಾಯಿಸಬೇಕೆಂದು ಶಾಸಕ ವೆಂಕಟರಮಣಪ್ಪ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತದಾದ್ಯಂತ ಭ್ರಷ್ಠಾಚಾರ ತಾಂಡವವಾಡುತ್ತಿದೆ. ಗಾಂಧಿ ಮತ್ತು ಅಂಬೇಡ್ಕರ್ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಬೇಕು ಎಂದರು.

ತಹಶೀಲ್ದಾರ್ ಪ್ರಸನ್ನ ಕುಮಾರ್ ಧ್ವಜಾರೋಹಣ ನೆರವೇರಿದರು. ಜಿ.ಪಂ. ಮಾಜಿ ಅಧ್ಯಕ್ಷ ಜಂಪಯ್ಯ, ವಕೀಲ ನಾಗೇಂದ್ರಪ್ಪ, ತಾ.ಪಂ. ಅಧ್ಯಕ್ಷೆ ವಿನೋದಮ್ಮ ಮಾತನಾಡಿದರು. ಪುರಸಭಾಧ್ಯಕ್ಷ ಗುರ‌್ರಪ್ಪ, ಇಒ ರಂಗನಾಥ್, ತಾಲೂಕು ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಯರ‌್ರಪ್ಪ, ರೈತ ಸಂಘದ ಮುಖಂಡ ನರಸಿಂಹರೆಡ್ಡಿ ಉಪಸ್ಥಿತರಿದ್ದರು. ಪಾವಗಡ ಪೊಲೀಸ್ ಠಾಣೆ ಸಿಪಿಐ ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT