ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಹೈ-ಕ ವಿಮೋಚನಾ ದಿನಾಚರಣೆ

Last Updated 19 ಸೆಪ್ಟೆಂಬರ್ 2011, 9:25 IST
ಅಕ್ಷರ ಗಾತ್ರ

ಸಿಂಧನೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಜನತೆ ಸಂಪನ್ಮೂಲಗಳ ಸದ್ಬಳಕೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಬೇಕು ಎಂದು ತಹಸೀಲ್ದಾರ್ ಕೆ.ನರಸಿಂಹ ನಾಯಕ ಕರೆ ನೀಡಿದರು.

ಅವರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರದೇಶ ಹಿಂದುಳಿಯಲು ಹಲವು ಸಮಸ್ಯೆಗಳಿರಬಹುದು. ಆ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕಾದ ಅವಶ್ಯಕತೆ ಇದೆ. ಚುನಾಯಿತ ಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಏಳ್ಗೆಯ ಪರ ಏಕಮುಖವಾಗಿ ಚಿಂತಿಸುವುದರಿಂದ ಹೊಸ ಬದಲಾವಣೆಗಳು ಆಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ವೆಂಕಟರಾವ್ ನಾಡಗೌಡ, ಡಾ.ಮಧುಮತಿ ದೇಶಪಾಂಡೆ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಪದ್ಮಾವತಿ ಕರಿಯಪ್ಪ. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರೇಶ ಇಲ್ಲೂರು, ಎಪಿಎಂಸಿ ಅಧ್ಯಕ್ಷೆ ಎನ್.ಶಾಂತಾ ಭೀಮನಗೌಡ, ಉಪಾಧ್ಯಕ್ಷ ಫಾರೂಖ್‌ಸಾಬ, ನಗರಸಭೆ ಸದಸ್ಯ ಕಾಸಿಂಸಾಬ ಕಾರ್ಪೆಂಟರ್ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೃಷಭೇದ್ರಯ್ಯಸ್ವಾಮಿ ಸ್ವಾಗತಿಸಿದರು. ವೀರೇಶ ಗೋನವಾರ ನಿರೂಪಿಸಿದರು. ವೆಂಕನಗೌಡ ವಟಗಲ್ ವಂದಿಸಿದರು.

ಕವಿತಾಳ ವರದಿ
ಪಟ್ಟಣದ ವಿವಿಧೆಡೆ ಹೈದರಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.

ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಶಾಂತಮ್ಮ ಅರಿಕೇರಿ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ಅಭಿವೃದ್ಧಿ ಅಧಿಕಾರಿ ಪಂಪನಗೌಡ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜ್ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳಲ್ಲಿ ಧ್ವಜಾರೋಹಣ ನಡೆಯಿತು. ದೇವತಗಲ್ ಹನುಮಂತರಾವ್ ಕುಲ್ಕರ್ಣಿ ಸ್ಮಾರಕ ಶಾಲೆಯಲ್ಲಿ ಮುಖ್ಯಗುರು ಸುಧೀಂದ್ರ ಧ್ವಜಾರೋಹಣ ಮಾಡಿದರು.

ಸಮೀಪದ ಅಮೀನಗಡ, ಪಾಮನಕಲ್ಲೂರು, ಹಿರೇಹಣಿಗಿ ಮತ್ತು ಬಾಗಲವಾಡ ಗ್ರಾಮ ಪಂಚಾಯಿತಿಗಳಲ್ಲಿ ವಿಮೋಚನಾ ದಿನಾಚರಣೆ ನಿಮಿತ್ಯ ಧ್ವಜಾರೋಹಣ ನಡೆಯಿತು.

ಜಾಲಹಳ್ಳಿ ವರದಿ
ಜಾಲಹಳ್ಳಿ:
ಪಟ್ಟಣದಲ್ಲಿ ವಿವಿಧೆಡೆ 63 ನೇ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. 

   ವಿವಿಧ ಶಾಲೆಗಳ ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ಪ್ರಭಾತ ಪೇರಿ ನಡೆಸಿ ಸಂಭ್ರಮದಿಂದ ಆಚರಿಸಿದರು. ನಂತರ ಗ್ರಾ.ಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷ ಜಿ.ಬಸವರಾಜ ನಾಯಕ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಶಾಮಿದಸಾಬ ಆರ್ತಿ, ಗ್ರಾ.ಪಂ ಸದಸ್ಯರಾದ ಅಮರೇಗೌಡ, ಭೀಮರಾಯ ಮಕಾಶಿ, ಸುರೇಶ್ ಪೂಜಾರಿ, ವಾಸುದೇವ ಕೋಲ್ಕಾರ್, ಪಿಡಿಓ ಚನ್ನಾರೆಡ್ಡಿ ಪಾಟೀಲ್ ಮುಖಂಡರಾದ ಗಿರಿಯಪ್ಪ ಪೂಜಾರಿ, ರಾಜಾವಾಸುದೇವ ನಾಯಕ ಉಪಸ್ಥಿತರಿದ್ದರು.

ಪಟ್ಟಣದ ಸರ್ಕಾರಿ ಬಾಲಕ, ಬಾಲಕೀಯರ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಸಮುದಾಯ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಜೆಜೆ ಶಿಕ್ಷಣ ಸಂಸ್ಥೆ, ಹಾಗೂ ಬ್ಯಾಂಕ್‌ಗಳಲ್ಲಿ ಸೇರಿದಂತೆ ಪಟ್ಟಣದ ಅನೇಕ ಕಡೆ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಮುದಗಲ್ಲ ವರದಿ:
ಮುದಗಲ್ಲ:
ಸ್ವಾತಂತ್ರ್ಯದ ನಂತರದಲ್ಲೂ ಹೈದರಾಬಾದ್ ನಿಜಾಮರು ಆಡಳಿತದಿಂದ ಮುಕ್ತಿಗೊಂಡ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಶನಿವಾರ ಹೈದರಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ ಬಗ್ಗೆ ವರದಿಗಳು ಬಂದಿವೆ.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ವಿರೂಪಮ್ಮ ದೇಸಾಯಿ ಧ್ವಜಾರೋಹಣ ನೆರವೇರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ, ಸದಸ್ಯರಾದ ಶರಣಮ್ಮ, ಲಲಿತಾ ಷಣ್ಮುಖಪ್ಪ, ಜೊಸೆಫ್ ಇರ‌್ಲಾ, ಮುದಿವೀರಪ್ಪ ಜೀಡಿ, ಮಹಿಬೂಬಸಾಬ, ಅಮೀರಬೇಗ್ ಉಸ್ತಾದ ಸೇರಿದಂತೆ ಮತ್ತಿತರರಿದ್ದರು.

ಪಟ್ಟಣದ ಸರ್ಕಾರಿ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಪೊಲೀಸ್ ಠಾಣೆ ಸಮುದಾಯ ಆರೋಗ್ಯ ಕೇಂದ್ರ ಗ್ರಾಮೀಣ ಪ್ರದೇಶಗಳ ಗ್ರಾಪಂ ಕಾರ್ಯಾಲಯ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ ಹೈಕ ವಿಮೋಚನಾ ದಿನಾಚರಣೆ ಆಚರಿಸಲಾಯಿತು.

ಮಸ್ಕಿ ವರದಿ:
ಮಸ್ಕಿ:
ಪಟ್ಟಣದ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧಡೆ ಶನಿವಾರ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು.
ಶಾಸಕರ ಕಾರ್ಯಲಯದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
 
ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಗೋನ್ವಾರ, ಸರ್ಕಾರಿ ಬಾಲಕಿರಯರ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಬಿ.ಎಚ್.ದಿವಟರ್ ಧ್ವಜಾರೋಹಣ ನೆರವೇರಿಸಿದರು.
ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವೀರೇಶ ಹೂವಿನಬಾವಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು. ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಮೋಚಿ ಸೈಕಲ್ ವಿತರಿಸಿದರು.

ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜ್, ಬಾಲಕರ ಪದವಿ ಪೂರ್ವ ಕಾಲೇಜ್, ಶಾರದ ಶಾಲೆ, ಲಯನ್ಸ್ ಶಾಲೆ, ಚರ್ಚ ಶಾಲೆ, ಪೊಲೀಸ್ ಠಾಣೆ, ಸಿಪಿಐ ಕಾರ್ಯಲಯ, ವಿಶೇಷ ತಹಸೀಲ್ದಾರ ಕಾರ್ಯಲಯ, ಬಸ್‌ಡಿಪೋ, ಬಸ್‌ಸ್ಟ್ಯಾಂಡ್, ಭ್ರಮರಾಂಬ ಸಹಕಾರಿ, ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಬ್ಯಾಂಕ್, ಶರಣಬಸವೇಶ್ವರ ಸಹಕಾರಿ, ಧರ್ಮಸ್ಥಳ ಮಂಜುನಾಥ ಸಹಕಾರಿ, ಸಿದ್ಧಗಂಗಾ ಸಹಕಾರಿಗಳಲ್ಲಿ ಧ್ವಜಾರೋಹಣ ನೆರವೇರಿಸಿದರು.               

ಮಾನ್ವಿ ವರದಿ
ಮಾನ್ವಿ:
ಹಿಂದುಳಿದ ಹಣೆಪಟ್ಟಿ ಹೊಂದಿರುವ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶ್ರಮಿಸುವುದು ಅಗತ್ಯ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಶನಿವಾರ ಪಟ್ಟಣದಲ್ಲಿ ತಾಲ್ಲೂಕು ಆಡಳಿತದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಹೈದರಾಬಾದ ಕರ್ನಾಟಕ ಭಾಗ ನಿಜಾಮ್ ಆಳ್ವಿಕೆಯಿಂದ ವಿಮೋಚನೆಯಾಗಿರಲಿಲ್ಲ. ಈ ಭಾಗದ ಹೋರಾಟಗಾರರ ಪರಿಶ್ರಮದಿಂದ ತಡವಾಗಿ ಸ್ವಾತಂತ್ರ್ಯ ದೊರಕಿತು. ಇಂದಿನ ಯುವಕರು ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವೀರಣ್ಣ ಜಾಗೀರಪನ್ನೂರು ಹಾಗೂ ಕಾಶೀರಾವ್ ಪಾಟೀಲ್ ತಮ್ಮ ಹೋರಾಟದ ಅನುಭವಗಳನ್ನು ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಶಾಂತಪ್ಪ ದೊಡ್ಡಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಡಿ.ವೀರನಗೌಡ ಅವರು `ಹೈದರಾಬಾದ ಕರ್ನಾಟಕ ವಿಮೋಚಾನಾ ಹೋರಾಟ~ ಕುರಿತು ಉಪನ್ಯಾಸ ನೀಡಿದರು.

ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ ಆಧ್ಯಕ್ಷತೆ ವಹಿಸಿದ್ದರು. ರಾಜ್ಯ ಖಾದಿ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಂಪನಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಮಲ್ಲಟ, ತಹಸೀಲ್ದಾರ್ ಎಮ್.ಗಂಗಪ್ಪ ಕಲ್ಲೂರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ವೇದಿಕೆಯಲ್ಲಿದ್ದರು.

ಖ್ಯಾತ ಕಲಾವಿದ ಅಂಬಯ್ಯ ನುಲಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಶಿಕ್ಷಕ ರಾಮಲಿಂಗಪ್ಪ ನಿರೂಪಿಸಿದರು. ಸೂರ್ಯಕಾಂತ ಬಾರಕೇರ ವಂದಿಸಿದರು.

ದಾರುಸ್ಸಲಾಮ್ ಶಿಕ್ಷಣ ಸಂಸ್ಥೆ: ಪಟ್ಟಣದ ದಾರುಸ್ಸಲಾಮ್ ಶಿಕ್ಷಣ ಸಂಸ್ಥೆಯ ಅಲ್-ಹಿರಾ ಪ್ರಾಥಮಿಕ ಶಾಲೆಯಲ್ಲಿ ಹೈದರಾಬಾದ ಕರ್ನಾಟಕ ವಿಮೋಚನ ದಿನಾಚರಣೆ ಅಂಗವಾಗಿ  ಆಡಳಿತಾಧಿಕಾರಿ ಮೌಲಾನ ಶೇಖ್ ಫರೀದ್ ಉಮರಿ ಧ್ವಜಾರೋಹಣ ನೆರವೇರಿಸಿದರು. ಅಕ್ಬರ್ ಸಾಬ್ ಗುತ್ತೇದಾರ ಮಾತನಾಡಿದರು. ಜನಾಬ್ ದಾವುದ್ ಸಿದ್ದಿಕಿ ಅಧ್ಯಕ್ಷತೆವಹಿಸಿದ್ದರು. ಜನಾಬ್ ಇದ್ರಿಸ್ ಸಾಬ್ ಇದ್ದರು. ಶಿಕ್ಷಕಿ ಜಯಶ್ರೀ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಲತಾ ವಂದಿಸಿದರು.

ಬಾಲಕಿಯರ ಸರ್ಕಾರಿ ಪಿಯು ಕಾಲೇಜು: ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯ ಅಮರೇಶ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಉಪನ್ಯಾಸಕ ರೇವಣಸಿದ್ದಯ್ಯ ಹಿರೇಮಠ ಉಪನ್ಯಾಸ ನೀಡಿದರು.

ಉಪನ್ಯಾಸಕರಾದ ಅಮರೇಗೌಡ ಚಾಗಬಾವಿ, ಬಿ.ಎಸ್.ಮಾಲೀಪಾಟೀಲ್, ಆನಂದಕುಮಾರ, ನಾಗಮಲ್ಲೇಶ, ರಂಗಸ್ವಾಮಿ, ಸುರೇಖಾ, ರುತ್ ನಳಿನಿ ಇದ್ದರು.

ನೇತಾಜಿ ಶಿಕ್ಷಣ ಸಂಸ್ಥೆ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.

ಸಾದಾಪುರ: ತಾಲ್ಲೂಕಿನ ಸಾದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್ ವಕೀಲ ವೆಂಕಟನರಸಿಂಹ, ಎಸ್‌ಡಿ ಎಮ್‌ಸಿ ಉಪಾಧ್ಯಕ್ಷೆ ದಾನವಮ್ಮ ಗೋವಿಂದಪ್ಪ, ಶಿವರಾಜ, ಶಾಲಂಸಾಬ, ಮುಖ್ಯ ಗುರು ಪ್ರಮೀಳಾ , ಪಿಡಿಒ ವಿಶ್ವನಾಥ ಮತ್ತಿತರರು ಇದ್ದರು.

ಆಲ್ದಾಳ: ತಾಲ್ಲೂಕಿನ ಆಲ್ದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಮುಖ್ಯ ಗುರು ಮೂಕಪ್ಪ ಕಟ್ಟಿಮನಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಮ್‌ಸಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.

ಬಾಗಲವಾಡ: ತಾಲ್ಲೂಕಿನ ಬಾಗಲವಾಡ ಗ್ರಾಮದ ಶ್ರೀಚೆನ್ನಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಮೇಟಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಮಾಲೀಪಾಟೀಲ್ ಹಾಗೂ ಅಮರೇಶ ಕಾವಲಿ, ಮುಖ್ಯ ಗುರು ಮಡಿವಾಳಪ್ಪ, ಶಿಕ್ಷಣ ಪ್ರೇಮಿ ಪಿ.ವೆಂಕಟೇಶ ಹಾಗೂ ಶಿಕ್ಷಕರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT