ವಿಜಾಪುರ: ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ನವ ದೆಹಲಿಯ ಇಂಡಿಯನ್ ಸೈನ್ಸ್ ಅಕಾಡೆಮಿ, ಅಲಹಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ಸೈನ್ಸ್ ಸಹಯೋಗದಲ್ಲಿ ಇಲ್ಲಿಯ ಬಿಎಲ್ಡಿಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನಲ್ಲಿ ‘ಜೀವ ವಿಜ್ಞಾನ’ ವಿಷಯದಲ್ಲಿ ಇದೇ 18ರಿಂದ 21ರ ವರೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಜೀವ ವಿಜ್ಞಾನ ವಿಷಯದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಧಾರವಾಡ ಕವಿವಿ ವಿಶ್ರಾಂತ ಕುಲಪತಿ ಹಾಗೂ ಐ.ಎನ್.ಎಸ್.ಇ ಉಪಾಧ್ಯಕ್ಷ ಡಾ.ಎಸ್.ಕೆ. ಸೈದಾಪುರ ಸಂಯೋಜಕತ್ವದಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಎಸ್.ಆರ್. ಯಡ್ರಾಮಿ ಹಾಗೂ ಸಂಘಟಕ ಡಾ.ಎಂ.ಬಿ. ಮೂಲಿಮನಿ ತಿಳಿಸಿದ್ದಾರೆ.
ವಿಜ್ಞಾನಿಗಳಾದ ಡಾ.ಎಸ್.ಕೆ. ಸೈದಾಪುರ, ಡಾ.ಎಚ್.ವೈ. ಮೋಹನರಾಮ್, ನ್ಯಾಕ್ ಮಾಜಿ ನಿರ್ದೇಶಕ ಡಾ.ಎಚ್.ಎ. ರಂಗನಾಥ, ಡಾ.ಆರ್. ರಾಘವೇಂದ್ರರಾವ್, ಡಾ.ಜಿ. ನಾಯಿಕ , ಎಂ್.ಎಸ್. ಗಂಗಾಧರ ಅವರು ಪ್ರಬಂಧ ಮಂಡಿಸಿ, ಜೀವ ವಿಜ್ಞಾನದ ಪ್ರಸ್ತುತ ವಿಷಯಗಳ ಬಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವರು.
ಜೀವ ವಿಕಸನ ವ್ಯವಸ್ಥೆಯ ಸಂಕೀರ್ಣತೆ, ಬೀಜ ಸಸ್ಯಶಾಸ್ತ್ರದ ನಿಗೂಢತೆ, ಆನುವಂಶಿಕತೆ, ಭಾರತದಲ್ಲಿ ಹೂವುಗಳ ವೈವಿಧ್ಯತೆ, ಸಸ್ಯಗಳ ಪ್ರಭೇದಗಳ ಜಾಗತೀಕರಣ, ಅನುವಂಶಿಕ ಪರಿವರ್ತಿತ ಬೆಳೆಗಳು, ಗ್ಲೊಕೋಲೈಸಿಸ್ ಮತ್ತು ಅದರ ಮಹತ್ವ, ಬೋಧನೆ ಮತ್ತು ಸಂಶೋಧನೆಯಲ್ಲಿ ಸಸ್ಯಗಳ ವರ್ಗೀಕರಣದ ಸಮಸ್ಯೆಗಳು, ಮಾನವ ವಿಕಸನ ಮತ್ತು ಆರೋಗ್ಯ, ವಿವಿಧ ಪ್ರಕಾರದ ಕಾಮಾಲೆಗಳು ಮತ್ತು ಜೈವಿಕ ಇಂಧನದ ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧ ಕಾಲೇಜುಗಳಿಂದ 150ಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.