ಗದಗ: `ಕಾಂಗ್ರೆಸ್ ಹೆಸರು ಹೇಳಿಕೊಂಡು ಕೆಲವರು ನನಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ' ಎಂದು ಗದಗ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅಬ್ದುಲ್ ರಹೆಮಾನ ತಿರ್ಲಾಪೂರ ಆರೋಪಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ನವರು ಹೈಜಾಕ್ ಮಾಡಿದ್ದಾರೆ. ಬೆದರಿಕೆಗೆ ಅಂಜದೇ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮನೆ, ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇನೆ. ಮುಂದೆ ಇದೇ ರೀತಿ ಬೆದರಿಕೆ ಕರೆ ಬಂದರೆ ಪಕ್ಷದ ನಾಯಕರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ, ದೇಶದಲ್ಲಿ ಜಾತ್ಯತೀತ ಪ್ರಧಾನಿಯಾದರೆ ಮಾತ್ರ ಹಿಂದುಳಿದ ಪ್ರದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಸರ್ಕಾರವೇ ಚುನಾವಣೆಯ ಖರ್ಚು ಮತ್ತು ವೆಚ್ಚ ಭರಿಸಿದಾಗ ಮಾತ್ರ ಸಾಮಾನ್ಯ ಅಭ್ಯರ್ಥಿ ಜನಪ್ರತಿನಿಧಿ ಯಾಗಲು ಸಾಧ್ಯ.