ಧಾರವಾಡ: ನಗರದ ಎಸ್ಡಿಎಂ ತಾಂತ್ರಿಕ ಕಾಲೇಜಿನಲ್ಲಿ ಈಚೆಗೆ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಧಾರವಾಡದ ಜೆಎಸ್ಎಸ್ ಕಾಲೇಜು ಪುರುಷ ಹಾಗೂ ಮಹಿಳೆಯರ ತಂಡಗಳು ಪ್ರಶಸ್ತಿ ತನ್ನದಾಗಿಸಿಕೊಂಡವು.
ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಜೆಎಸ್ಎಸ್ ಕಾಲೇಜು ತಂಡ 25-19, 25-21 ನೇರ ಸೆಟ್ಗಳಿಂದ ತುಮಕೂರಿನ ಎಸ್ಐಟಿ ಕಾಲೇಜು ತಂಡವನ್ನು ಮಣಿಸಿತು. ಈ ಮೂಲಕ 15 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎಸ್ಐಟಿ ಕಾಲೇಜು ತಂಡ ರೂ 10 ಸಾವಿರ ನಗದು, ಪ್ರಶಸ್ತಿ ಮತ್ತು ಟ್ರೋಫಿಯನ್ನು ಪಡೆಯಿತು.
ಮಹಿಳೆಯರ ವಿಭಾಗ ಫೈನಲ್ನಲ್ಲಿ ಜೆಎಸ್ಎಸ್ ತಂಡ 25-16, 25-20 ಅಂತರದಿಂದ ತುಮಕೂರಿನ ಎಸ್ಐಟಿ ತಂಡವನ್ನು ಮಣಿಸಿತು. ಜೆಎಸ್ಎಸ್ ಕಾಲೇಜು ರೂ. 10 ಸಾವಿರ ನಗದು, ಟ್ರೋಫಿ ಪಡೆದರೆ, ಎಸ್ಐಟಿ ಕಾಲೇಜು ರೂ 7 ಸಾವಿರ ನಗದು, ಹಾಗೂ ಪ್ರಶಸ್ತಿ ಗಳಿಸಿತು.
ಎಸ್ಡಿಎಂ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಮೋಹನಕುಮಾರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಡಾ.ಎ.ಜಿ.ಬುಜರ್ಕೆ ಹಾಗೂ ಖಾಲಿದ್ಖಾನ್ ಇದ್ದರು.