ಬೆಂಗಳೂರು: ಜನಚೇತನ ಯಾತ್ರೆ ಮೂಲಕ ರಾಜ್ಯಕ್ಕೆ ಬರುವ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಜೈಲಿನಲ್ಲಿರುವ ಅವರ ಪಕ್ಷದವರನ್ನು ಭೇಟಿ ಮಾಡುತ್ತಾರೆಯೇ? ಈ ರೀತಿ ಪ್ರಶ್ನೆ ಮಾಡಿರುವುದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್.
ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಅಡ್ವಾಣಿ ರಥಯಾತ್ರೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜೈಲಿಗೆ ಹೋಗಿ ತಮ್ಮ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಾರೊ ಅಥವಾ ರಾಜ್ಯದ ಜನರನ್ನು ಭೇಟಿ ಮಾಡಲು ಬರುತ್ತಾರೊ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನ.2ಕ್ಕೆ ಅಧಿಕಾರ ಸ್ವೀಕಾರ
ಇತ್ತೀಚೆಗೆ ಚುನಾಯಿತರಾದ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ನವೆಂಬರ್ 2ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಯುವ ಕಾಂಗ್ರೆಸ್ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಅಖಿಲ ಭಾರತ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯೂ ಆದ ರಾಜ್ಯದ ಉಸ್ತುವಾರಿ ಬಿಸ್ವರಂಜನ್ ಮೊಹಂತಿ, ಎಲ್ಲ ಎಂಟು ಮಂದಿ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಎಲ್ಲ ಜಿಲ್ಲೆಗಳ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.