ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ತಾಣ ರಕ್ಷಣೆ ಅಗತ್ಯ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿ~ಯಲ್ಲಿ ಸ್ಥಾನ ಪಡೆದಿರುವ ಪಶ್ಚಿಮಘಟ್ಟದ ಸಂರಕ್ಷಣೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, 39ಅತಿ ಸೂಕ್ಷ್ಮ ಜೈವಿಕ ವೈವಿಧ್ಯ ತಾಣಗಳನ್ನು ಜೋಪಾನವಾಗಿ ಕಾಪಾಡಲು ಅಂತರರಾಷ್ಟ್ರೀಯ ಮಟ್ಟದ ಉಸ್ತುವಾರಿ ಅಗತ್ಯ~ ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಸಲಹೆ ಮಾಡಿದೆ.

ಪಶ್ಚಿಮಘಟ್ಟಕ್ಕೆ ಯುನೆಸ್ಕೊ ಮಾನ್ಯತೆ ಪಡೆಯಲು ಪೂರ್ವ ಷರತ್ತಾಗಿ ಪರಿಸರ ತಜ್ಞ ಮಾಧವ ಗಾಡ್ಗೀಳ್ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕೆಂಬ ವಿಶ್ವ ಪರಂಪರೆ ಸಲಹಾ ಸಮಿತಿ ಬೇಡಿಕೆಯನ್ನು ಭಾರತ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ `ಐಯುಸಿಎನ್~ ಈ ಸಲಹೆ ನೀಡಿದೆ.

ಪಶ್ಚಿಮಘಟ್ಟದ ಸೂಕ್ಷ್ಮ ತಾಣಗಳು ಯುನೆಸ್ಕೊ ಪಟ್ಟಿಗೆ ಸೇರುವುದನ್ನು ಸ್ವಾಗತಿಸುತ್ತೇವೆ. ಆದರೆ, ಜಾಗತಿಕವಾಗಿ ಮಹತ್ವದ್ದಾಗಿರುವ ಈ ತಾಣಗಳ ಸಂರಕ್ಷಣೆ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು ವಿಶ್ವ ಪರಂಪರೆ ಸಮಿತಿ ಉಸ್ತುವಾರಿ ನಡೆಸುವ ಅಗತ್ಯವಿದೆ ಎಂದು`ಐಯುಸಿಎನ್~ ಮುಖ್ಯಸ್ಥ ಟಿಮ್ ಬಡ್ಮನ್ ಹೇಳಿದ್ದಾರೆ.

ಪಶ್ಚಿಮಘಟ್ಟ ಪರಿಸರ ದೃಷ್ಟಿಯಿಂದ ಅಪೂರ್ವವಾಗಿದ್ದರೂ ನಿರ್ದಿಷ್ಟ ಮಾನದಂಡ, ಮಾರ್ಗಸೂಚಿ ಅನ್ವಯ ಈ ತಾಣಗಳ ಮೌಲ್ಯಮಾಪನ ಆಗಿರದ ಹಿನ್ನೆಲೆಯಲ್ಲಿ ವಿಶ್ವ ಪರಂಪರೆ ಮಾನ್ಯತೆ ನೀಡುವುದಕ್ಕೆ `ಐಯುಸಿನ್~ ಒಲವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಪರೂಪದ ಪ್ರಾಣಿ- ಪಕ್ಷಿ- ಸಸ್ಯ ಸಂಕುಲಗಳ ತಾಣವಾಗಿರುವ ಪಶ್ಚಿಮ ಘಟ್ಟ ಸಂರಕ್ಷಣೆಗೆ ರಾಜ್ಯ ಸರ್ಕಾರದ ಜತೆ ಸಹಕರಿಸಲು ಸಿದ್ಧ ಎಂದೂ `ಐಯುಸಿಎನ್~ ಹೇಳಿದೆ.

ಇನ್ನೊಂದು ಸಮಿತಿಗೆ  ಗಾಡ್ಗೀಳ್ ಆಕ್ಷೇಪ

ನವದೆಹಲಿ (ಪಿಟಿಐ): ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿ (ಡಬ್ಲುಜಿಇಇಪಿ) ಶಿಫಾರಸುಗಳನ್ನು ಅಧ್ಯಯನ ಮಾಡಲು ಇನ್ನೊಂದು ಸಮಿತಿ ರಚಿಸುವ ಕೇಂದ್ರದ ನಿರ್ಧಾರವನ್ನು ಸಮಿತಿ ಅಧ್ಯಕ್ಷ ಮಾಧವ್ ಗಾಡ್ಗೀಳ್ ಟೀಕಿಸಿದ್ದಾರೆ. `ಆ ಪ್ರದೇಶದ ಜನರಿಂದ ಮಾಹಿತಿ ಪಡೆಯದೇ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ~ ಎಂದು ಅವರು  ಕಿಡಿಕಾರಿದ್ದಾರೆ.

ಗಾಡ್ಗೀಳ್ ನೇತೃತ್ವದ `ಡಬ್ಲುಜಿಇಇಪಿ~ ಸಮಿತಿ ವರದಿ ಅಧ್ಯಯನ ಮಾಡಲು ಕೇಂದ್ರ ಇನ್ನೊಂದು ತಂಡವನ್ನು ರಚಿಸಲು ನಿರ್ಧರಿಸಿದ್ದು, ಇದಕ್ಕೆ ಕೇರಳ, ಕರ್ನಾಟಕದಿಂದ ವಿರೋಧ ವ್ಯಕ್ತವಾಗಿದೆ ಎಂದು ಪರಿಸರ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT