ಯಳಂದೂರು: ಚಾಮರಾಜನಗರ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಅಮೆರಿಕದ ಟಾಮ್ ಕಂಪನಿ ಉಚಿತವಾಗಿ ಶೂ ವಿತರಿಸಲು ಮುಂದಾಗಿದೆ. ಇದು ವಿದ್ಯಾರ್ಥಿಗಳ ಪಾಲಿಗೆ ಇಂತಹ ನೆರವು ವರದಾನ. ಕಾಡು ಮೇಡು ಹತ್ತಿ ಬರುವ ಬುಡಕಟ್ಟು ಚಿಣ್ಣರಿಗೂ ಇದರ ಸೌಲಭ್ಯ ಸಿಕ್ಕಿದೆ. ಇದರ ನೆರವು ಪಡೆದವರು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುವುದರ ಮೂಲಕ ನೆರವು ನೀಡಿದ ಕಂಪನಿಗಳ ಕಾಳಜಿ ಗೌರವಿಸಬೇಕು' ಎಂದು ಜಿಲ್ಲಾಧಿಕಾರಿ ಸಾವಿತ್ರಿ ಟಾಮ್ ಕಂಪನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಿಳಿಗಿರಿಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಆವರಣದಲ್ಲಿ ಮಂಗಳವಾರ ಗಿರಿಜನ ಶಾಲಾ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಶೂ ವಿತರಿಸಿ ಮಾತನಾಡಿದರು.
`ಟಾಮ್ ಕಂಪನಿ ಜಿಲ್ಲೆಯ ಎಲ್ಲಾ ಬಾಲವಾಡಿ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಉಚಿತ ಶೂ ವಿತರಿಸುತ್ತದೆ. ಕಂಪನಿ ಶಿಕ್ಷಣಕ್ಕೆ ನೀಡುವ ಕಾಳಜಿ ಮೆಚ್ಚಬೇಕು. ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ನೆರವಾಗಲಿದೆ' ಎಂದರು.
ಟಾಮ್ ಕಂಪನಿಯ ಸಂಯೋಜಕರಾದ ಅನಿತಾ ಭಟ್ ಮಾತನಾಡಿದರು.
`ಕಂಪನಿ ಅಮೆರಿಕದ ಲಾಸ್ಎಂಜಲಿಸ್ ನಗರದಲ್ಲಿದೆ. ವಿದ್ಯಾರ್ಥಿ ಒಂದು ಜೊತೆ ಶೂ ಕೊಂಡರೆ ಉಚಿತವಾಗಿ ಮತ್ತೊಂದು ಜೊತೆ ನೀಡುವ ಧ್ಯೇಯ ಕಂಪನಿಯದು. ಭಾರತದ ಆಯ್ದ 18 ರಾಜ್ಯಗಳಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಕರ್ನಾಟಕದಲ್ಲಿ ಬೆಂಗಳೂರು, ಚಾಮರಾಜನಗರ ಜಿಲ್ಲೆಯನ್ನು ಯಳಂದೂರು ಕರುಣ ಟ್ರಸ್ಟ್ ಸಹಯೋಗದಡಿ ಆಯ್ಕೆ ಮಾಡಿಕೊಳ್ಳಲಾಗಿದೆ' ಎಂದರು.
ಕರುಣ ಟ್ರಸ್ಟ್ನ ಜಂಟಿ ಕಾರ್ಯದರ್ಶಿ ವೆಂಕಟರಮಣ, ಶಿಶು ಅಭಿವೃದ್ಧಿ ಅಧಿಕಾರಿ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೇತಮ್ಮ. ತಹಶಿಲ್ದಾರ್ ಶಿವರಾಮು, ಜಿಲ್ಲಾ ಬುಡಕಟ್ಟು ಜನಾಂಗದ ಕಾರ್ಯದರ್ಶಿ ಸಣ್ಣ ಮಾದೇಗೌಡ ಹಾಜರಿದ್ಧರು.