ವಿಜಾಪುರ: ‘ಟಿಪ್ಪು ಸುಲ್ತಾನ್ ಸರ್ವಧರ್ಮಗಳ ರಕ್ಷಕ. ಕೆಲವರು ಅಸೂಯೆಯಿಂದ ಆತನನ್ನು ಮತಾಂಧ ಎಂದು ಟೀಕಿಸುತ್ತಿರುವುದು ಸರಿಯಲ್ಲ. ಟಿಪ್ಪು ಜಯಂತಿಯನ್ನು ಪ್ರತಿ ವರ್ಷ ಸರ್ಕಾರವೇ ಆಚರಿಸಬೇಕು’ ಎಂದು ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಮತ್ತು ಫೆಡಿನಾ ಸಂಸ್ಥೆ ವತಿಯಿಂದ ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಚಿಂತನೆಗಳ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
‘ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಕೃಷಿ, ವಿಜ್ಞಾನ, ಪರಿಸರ, ಆಡಳಿತ, ಸೈನಿಕ ತಂತ್ರಗಾರಿಕೆ, ಸಾಹಿತ್ಯ... ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
‘ಕನ್ನಡ ನಾಡಿಗೆ ಟಿಪ್ಪು ಕೊಡುಗೆ ಅಪಾರ. ಟಿಪ್ಪು ಧರ್ಮಾಂಧನಾಗಿರಲಿಲ್ಲ’ ಎಂದು ಮಹಿಳಾ ವಿವಿ ಶಿಕ್ಷಣ ವಿಭಾಗದ ಉಪನ್ಯಾಸಕ ಡಾ.ವಿಷ್ಣು ಶಿಂಧೆ ಹೇಳಿದರು.
‘ಟಿಪ್ಪು ಹಿಂದೂ ಧರ್ಮದ ರಕ್ಷಕ ಎಂದು ಹಲವಾರು ಸಂಶೋಧಕರು ಹೇಳಿದ್ದಾರೆ. ಆತನ ಸೈನ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಹಿಂದೂಗಳೇ ಇದ್ದರು’ ಎಂದು ಉಪನ್ಯಾಸಕ ಶರಣಗೌಡ ಪಾಟೀಲ ಹೇಳಿದರು. ಅಂಜುಮನ್ ಕಾಲೇಜಿನ ಉಪನ್ಯಾಸಕ ಡಾ.ಮಂಜೂರ್ಅಹ್ಮದ್ ಇನಾಂದಾರ, ಸಾನಿಧ್ಯ ವಹಿಸಿದ್ದ ದಾವಣಗೆರೆಯ ಮೌಲಾನಾ ಇಬ್ರಾಹಿಂ ಸಕಾಫಿ ಮಾತನಾಡಿದರು. ಮುದ್ದೇಬಿಹಾಳದ ಅಲ್ಲಾಬಕ್ಷ್ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ಹಾಶಿಮ್ಪೀರ್ ವಾಲೀಕಾರ, ಪ್ರಭುಗೌಡ ಪಾಟೀಲ, ಚಂದ್ರಕಾಂತ ಹಿರೇಮಠ, ರವೂಫ್ ಶೇಖ್, ಬಷೀರ್ಅಹ್ಮದ್ ಶೇಖ್ ಉಮರಿ, ದಾವಣಗೆರೆಯ ವಕೀಲ ಅನೀಸ್, ಶ್ರೀನಿವಾಸ ಗುರ್ಜಾಲ್ ಪಾಲ್ಗೊಂಡಿದ್ದರು.