ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ‘ರಾಜಕೀಯದ ಮಧ್ಯೆ ಬಿಡುವು’ ಪಡೆದುಕೊಂಡರು! ಕಾರಣ ಭಾರತ- ಪಾಕಿಸ್ತಾನಗಳ ನಡುವೆ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯ!ಬೆಳಿಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ, ನಂತರ ನೇರವಾಗಿ ತೆರಳಿದ್ದು ರೇಸ್ಕೋರ್ಸ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ನಿವಾಸಕ್ಕೆ - ಭಾರತ- ಪಾಕ್ ಪಂದ್ಯ ವೀಕ್ಷಣೆಗೆ.
ಮಧ್ಯಾಹ್ನ 2.30ಕ್ಕೆ ಪಂದ್ಯ ಆರಂಭವಾದಾಗಿಂದ ಮುಖ್ಯಮಂತ್ರಿಗಳು ತಮ್ಮ ನಿವಾಸದಿಂದ ಹೊರ ಬರಲಿಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಜತೆ ಕುಳಿತು ಅವರು ಕ್ರಿಕೆಟ್ ಆಟದ ಸವಿಯುಂಡರು.ಇದು ಮುಖ್ಯಮಂತ್ರಿಯ ಕತೆಯಾದರೆ, ಇನ್ನು ಬಹುತೇಕ ಎಲ್ಲ ಸಚಿವರು ಮತ್ತು ಅಧಿಕಾರಿಗಳು ಕೂಡ ವಿಧಾನಸೌಧದಲ್ಲಿ ಕಾಣಿಸಲಿಲ್ಲ. ಮಧ್ಯಾಹ್ನ ನಂತರ ಇಡೀ ವಿಧಾನಸೌಧ ಸಿಬ್ಬಂದಿ ಮತ್ತು ಜನರಿಲ್ಲದೆ ಖಾಲಿ ಖಾಲಿಯಾಗಿತ್ತು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರೂ ಬುಧವಾರ ಬೆಳಿಗ್ಗೆಯಿಂದಲೇ ‘ಕ್ರಿಕೆಟ್ ಮೂಡ್’ನಲ್ಲಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲೂ ಅವರಲ್ಲಿ ಉಪ ಚುನಾವಣೆಯ ಜೊತೆಗೆ ಕ್ರಿಕೆಟ್ ಬಿಸಿಯೂ ಆವರಿಸಿಕೊಂಡಿದ್ದು ಗೊತ್ತಾಗುತ್ತಿತ್ತು. ಮಧ್ಯಾಹ್ನ ನಂತರ ಅವರು ಕೂಡ ಕ್ರಿಕೆಟ್ ವೀಕ್ಷಣೆ ಮಾಡಿದರು.