ಲಂಡನ್(ಪಿಟಿಐ): ಗುಜರಾತ್ನಲ್ಲಿ 1993ರಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಭೂಗತ ಪಾತಕಿ ಟೈಗರ್ ಹನೀಫ್ನನ್ನು ಒಪ್ಪಿಸುವಂತೆ ಬ್ರಿಟನ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಕೊಲೆ ಹಾಗೂ ಸ್ಫೋಟ ಸಂಚು ಆರೋಪದ ಮೇಲೆ ಮೊಹಮ್ಮದ್ ಹನೀಫ್ ಉಮ್ರೇಜಿ ಪಟೇಲ್ನನ್ನು (51) 2010ರ ಮಾರ್ಚ್ನಲ್ಲಿ ಬ್ರಿಟನ್ ಪೊಲೀಸರು ಗ್ರೇಟರ್ ಮ್ಯಾಂಚೆಸ್ಟರ್ನ ಬಾಲ್ಟನ್ನಲ್ಲಿ ಬಂಧಿಸಿದ್ದರು. ಈತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಎನ್ನಲಾಗಿದೆ. ಕೋರ್ಟ್ ಆದೇಶವನ್ನು ಪ್ರಶ್ನಿಸಿ ಹನೀಫ್ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.
ಭಾರತಕ್ಕೆ ಬೇಕಾದ ಅನೇಕ ವ್ಯಕ್ತಿಗಳು ಬ್ರಿಟನ್ ಆಶ್ರಯದಲ್ಲಿ ಇದ್ದಾರೆ. ಆದರೆ ಹಲವಾರು ಕಾರಣಗಳಿಂದ ಇವರನ್ನೆಲ್ಲ ಕರೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತವು 1993ರಲ್ಲಿ ಬ್ರಿಟನ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಹನೀಫ್ ಪ್ರಕರಣದ ಮೂಲಕ ಭಾರತವು ಇದೇ ಮೊದಲ ಬಾರಿ ತನಗೆ ಬೇಕಾದ ವ್ಯಕ್ತಿಯನ್ನು ದೇಶಕ್ಕೆ ಕರೆಸಿಕೊಳ್ಳುತ್ತಿದೆ.